ನವದೆಹಲಿ : ಕೇಂದ್ರ ಸರ್ಕಾರ ಪ್ರತಿ ವರ್ಷ ನೀಡುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಮಂಗಳವಾರ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಧಾನ ಮಾಡಿದರು. ಒಟ್ಟು 85 ಗಣ್ಯರು ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದರು. ಆದರೆ ಈ ಬಾರಿಯ ವಿಶೇಷತೆಯೆಂದರೆ ದಕ್ಷಿಣ ಭಾರತದ ಕಲಾವಿದರೆ ಹೆಚ್ಚಿನ ಪ್ರಶಸ್ತಿ ಬಾಚಿಕೊಂಡಿದ್ದಾರೆ.
ಈ ಬಾರಿ ಕನ್ನಡದ ಚಿತ್ರಗಳಾದ ಕಾಂತಾರ ಮತ್ತು ಕೆಜಿಎಫ್ ಸಿನಿಮಾಗಳಿಗೆ ರಾಷ್ಟ್ರ ಪ್ರಶಸ್ತಿ ದೊರೆತಿದ್ದು ಕಾಂತಾರ ಚಿತ್ರದ ಅಭಿನಯಕ್ಕೆ ರಿಷಬ್ ಶೆಟ್ಟಿಯವರಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ. 10 ವರ್ಷಗಳ ನಂತರ ಕನ್ನಡಕ್ಕೆ ಈ ಪ್ರಶಸ್ತಿ ದೊರೆತಿದ್ದು ಕೊನೆಯದಾಗಿ ದಿವಂಗತ ಸಂಚಾರಿ ವಿಜಯ್ ಅವರು ನಾನು ಅವನಲ್ಲ, ಅವಳು ಚಿತ್ರಕ್ಕೆ ಈ ಪ್ರಶಸ್ತಿ ಪಡೆದಿದ್ದರು.
ಕಳೆದ ಆಗಸ್ಟ್ನಲ್ಲಿ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟವಾಗಿದ್ದು ಕನ್ನಟಕ್ಕೆ ಈ ಬಾರಿ ಒಟ್ಟು 7 ಪ್ರಶಸ್ತಿಗಳು ಲಭಿಸಿವೆ. ನಟ ಯಶ್ ಅಭಿನಯದ ಕೆಜಿಎಫ್-2 ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಸಿನಿಮಾ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದ್ದು. ಇದೇ ಸಿನಿಮಾದ ಸಾಹಸ ನಿರ್ದೇಶನಕ್ಕಾಗಿ ಅನ್ವರಿವ್ಗೆ ಅತ್ಯುತ್ತಮ ಸಾಹಸ ನಿರ್ದೇಶಕ ಎಂಬ ಪ್ರಶಸ್ತಿ ಲಭಿಸಿದೆ. ನಾನ್ ಫೀಚರ್ ಫಿಲಂ ವಿಭಾಗದಲ್ಲಿ ಬಸ್ತಿ ದಿನೇಶ್ ಶೆಣೈ ಅವರ ಮಧ್ಯಂತರ ಸಿನಿಮಾಗೆ ಪ್ರಶಸ್ತಿ ಪಡೆದಿದ್ದಾರೆ. ರಂಗ ವೈಭೋಗ ಚಿತ್ರಕ್ಕಾಗಿ ಕಲೆ ,ಮತ್ತು ಸಂಸ್ಕೃತಿ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿ ಗೆದ್ದ ಪ್ರಮುಖರೆಂದರೆ. ರಿಷಬ್ ಶೆಟ್ಟಿ( ಅತ್ಯುತ್ತಮ ನಟ ), ನಿತ್ಯಾ ಮೆನನ್ ಮತ್ತು ಮಾನಸಿ ಪಾರೇಖ್ (ಅತ್ಯುತ್ತಮ ನಟಿ), ಸೂರಜ್ ಬಾರ್ಜತ್ಯ ( ಅತ್ಯುತ್ತಮ ನಿದೇರ್ಶಕ), ಎ.ಆರ್ ರೆಹಮಾನ್ (ಅತ್ಯುತ್ತಮ ಹಿನ್ನಲೆ ಸಂಗೀತ ನಿರ್ದೇಶಕ) , ಅರಿಜೀತ್ ಸಿಂಗ್ (ಅತ್ಯುತ್ತಮ ಗಾಯಕ), ಜಯಶ್ರೀ (ಅತ್ಯುತ್ತಮ ಗಾಯಕಿ) ಪ್ರಶಸ್ತಿ ಲಭಿಸಿದೆ.
ಇನ್ನು ಇದೇ ವೇಳೆ ನಟ ಮಿಥುನ್ ಚಕ್ರವರ್ತಿಗೆ ಸಿನಿಮಾ ರಂಗದ ಅತ್ಯುತ್ತಮ ಪ್ರಶಸ್ತಿಯಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ದೊರೆತಿದೆ.