ಶಿವಮೊಗ್ಗ : ದೇಹವನ್ನು ಹುರಿಗೊಳಿಸಿ, ಕಟ್ಟುಮಸ್ತಾಗಿ ಬೆಳೆಸಿದ ಯುವಕರು ಒಂದೆಡೆ ಆಕರ್ಷಕವಾಗಿ ಫೋಸ್ ಕೊಡ್ತಾ ಇದ್ರೆ ಮತ್ತೊಂದೆಡೆ, ಬಾಡಿ ಬಿಲ್ಡರ್ ಗಳನ್ನು ಜನರು ಶಿಳ್ಳೆ, ಕೇಕೆ, ಚಪ್ಪಾಳೆಗಳ ಮೂಲಕ ಹುರಿದುಂಬಿಸುತ್ತಿದ್ರು. ಅಂದಹಾಗೆ, ಈ ದೃಶ್ಯ ಕಂಡು ಬಂದಿದ್ದು, ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿ.
ಹೌದು, ಶಿವಮೊಗ್ಗ ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಯುವ ದಸರಾ ಅಂಗವಾಗಿ ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ಧ ಸ್ಪರ್ಧೆಯಲ್ಲಿ ದೇಹದಾರ್ಢ್ಯ ಪಟುಗಳು ತಮ್ಮ ಮೈಕಟ್ಟಿನ ಮೂಲಕ ನೆರೆದವರಲ್ಲಿ ರೋಮಾಂಚನ ಮೂಡಿಸಿದರು.
ಸ್ಪರ್ಧೆಯಲ್ಲಿ ಬಳ್ಳಾರಿ, ಬೆಳಗಾವಿ, ಮೈಸೂರು, ಹಾವೇರಿ, ಕಲಬುರಗಿ, ವಿಜಯಪುರ, ಉಡುಪಿ, ಧಾರವಾಡ, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ ಸೇರಿ ಬಹುತೇಕ ಕಡೆಗಳಿಂದ ಆಗಮಿಸಿದ್ದರು. 55 ಕೆ.ಜಿ.ಯಿಂದ 90 ಕೆ.ಜಿ.ಯವರೆಗಿನ ವಿಭಾಗದಲ್ಲಿ ಸ್ಪರ್ಧೆ ನಡೆಯಿತು. 220 ಸ್ಪರ್ಧಾಳುಗಳು ಭಾಗವಹಿಸಿದ್ದರು.
ಸ್ಪರ್ಧಿಗಳು ವಿವಿಧ ಭಂಗಿಯಲ್ಲಿ ತಮ್ಮ ದೇಹವನ್ನು ಪ್ರದರ್ಶನ ಮಾಡಿದರು. ಈ ವೇಳೆ ಯುವಕರು ಹರ್ಷೋದ್ಗಾರ ಮಾಡುತ್ತಿದ್ದರು. ಜೋರಾಗಿ ಚಪ್ಪಾಳೆ ತಟ್ಟುವ ಮೂಲಕ ಅವರಿಗೆ ಪ್ರೋತ್ಸಾಹ ನೀಡಿದರೆ. ಈ ಸ್ಪರ್ಧೆಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಚಾಲನೆ ನೀಡಿದರು.