ಬೆಂಗಳೂರು: ಯಶವಂತಪುರ ಕ್ಷೇತ್ರದ MR ಲೇಔಟ್ ನಿವಾಸಿಗಳಿಗೆ ಡೆಂಘೀ ಭೀತಿ ಶುರುವಾಗಿದೆ. ಮನೆಗಳ ಮುಂದೆಯೇ ಕಸ ಬಿದ್ದಿದ್ದು, ವಿಲೇವಾರಿ ಮಾಡದ ಪಾಲಿಕೆಯ ಸಿಬ್ಬಂದಿ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರಿನಲ್ಲಿ ಡೆಂಘೀ ದಿನೇದಿನೇ ಆತಂಕ ಸೃಷ್ಟಿಸ್ತಿದೆ. BBMP ಕಮಿಷನರ್ ನಾನಾ ಕಸರತ್ತು ನಡೆಸುತ್ತಿದ್ರೂ ನಿಯಂತ್ರಣಕ್ಕೆ ಸಿಗ್ತಿಲ್ಲ. ಇದೇ ಡೆಂಘೀ ಭೀತಿಯಿಂದ ಯಶವಂತಪುರ ಕ್ಷೇತ್ರದ MR ಲೇಔಟ್ ನಿವಾಸಿಗಳು ಅಕ್ಷರಶಃ ಭಯಭೀತಗೊಂಡಿದ್ದಾರೆ. ಫುಟ್ಪಾತ್ ಮೇಲಿನ ಕಸ ವಿಲೇವಾರಿ ಮಾಡದೇ ಇರೋದ್ರಿಂದ ಸೊಳ್ಳೆಗಳ ಕಾಟ ಜಾಸ್ತಿಯಾಗಿದೆ.
ಇದನ್ನೂ ಓದಿ: ಡೆಂಘೀ ನಿಯಂತ್ರಣಕ್ಕೆ ಗ್ರಾಮ ಸಮಿತಿ ರಚನೆ- ಪ್ರಿಯಾಂಕ್ ಖರ್ಗೆ
ಕಳೆದೊಂದು ವಾರದಿಂದ MR ಲೇಔಟ್ ಜನರಲ್ಲಿ ಜ್ವರ ಕಾಣಿಸಿಕೊಳ್ತಿದೆ. ಕಸ ವಿಲೇವಾರಿ ಮಾಡುವಂತೆ ಪಾಲಿಕೆಯ ಅಧಿಕಾರಿಗಳಿಗೆ ಹೇಳಿದ್ರೂ ಯಾವುದೇ ಪ್ರಯೋಜನ ಆಗಿಲ್ಲ. ಆರೋಗ್ಯ ಹದಗೆಟ್ಟು ಕಾಯಿಲೆಗಳು ಬಂದ್ರೆ ನಮಗೆ ಯಾರು ಗತಿ ಅಂತ ಜನರು ಕಿಡಿಕಾರಿದ್ದಾರೆ. ಇತ್ತ ಮನೆಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು ಇಲ್ಲದಿದ್ರೆ ದಂಡ ಹಾಕ್ತೀವಿ ಅಂತ ಕಮಿಷನರ್ ಸೂಚನೆ ನೀಡಿದ್ದಾರೆ. ಆದ್ರೆ ಪಾಲಿಕೆಯ ಕೆಲ ಸಿಬ್ಬಂದಿಯೇ ಆಯಾ ಏರಿಯಾಗಳಲ್ಲಿ ಕಸ ವಿಲೇವಾರಿ ಮಾಡಿಸ್ತಿಲ್ಲ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.