Sunday, July 7, 2024

ಮುಡಾ ಅಕ್ರಮ: ಸಿಎಂ ಸಿದ್ದರಾಮಯ್ಯ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ ಸ್ಪಷ್ಟನೆ

ಮೈಸೂರು: ನಗರಾಭಿವೃದ್ಧಿ ಪ್ರಾಧಿಕಾರ ಮುಡಾ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ಬಿಜೆಪಿ ವಾಗ್ದಾಳಿ ತೀವ್ರಗೊಳಿಸಿರುವ ಬೆನ್ನಲ್ಲೇ, ಸಿಎಂ ಸಿದ್ದರಾಮಯ್ಯರ ಕಾನೂನು ಸಲಹೆಗಾರ, ಶಾಸಕ ಎಎಸ್ ಪೊನ್ನಣ್ಣ ಆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ‌ ಎರಡು ಮೂರು ದಿನಗಳಿಂದ ಪ್ರತಿಪಕ್ಷಗಳು ಮುಡಾ ಹಗರಣ ವಿಚಾರ ಪ್ರಸ್ತಾಪ ಮಾಡುತ್ತಿವೆ. ಸಿಎಂ ಧರ್ಮಪತ್ನಿಗೆ ಪರಿಹಾರ ನೀಡಿದ ವಿಚಾರದಲ್ಲಿ ಹಗರಣ ದೊಡ್ಡದಾಗಿದೆ ಎಂದು ಬಿಂಬಿಸುವ ಯತ್ನ ನಡೆಯುತ್ತಿದೆ. ಮುಖ್ಯವಾಗಿ ಇದೊಂದು ಹಗರಣ ಎಂದು ತೋರಿಸುವ ಪ್ರಯತ್ನ ಆಗುತ್ತಿದೆ. ಬಿಜೆಪಿಯವರು ದುರುದ್ದೇಶದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನಾಗರೀಕರು ಆಸ್ತಿ ಕಳೆದುಕೊಂಡಾಗ ಅದಕ್ಕೆ ಪರಿಹಾರ ಪಡೆಯುವುದು ಮೂಲಭೂತ ಹಕ್ಕು. ಅದು ಸಿಎಂ ಧರ್ಮಪತ್ನಿಯೇ ಆಗಲಿ ಯಾರೇ ಆಗಲಿ, ಅವರು ಕಳೆದುಕೊಂಡ ಆಸ್ತಿಗೆ ಪರಿಹಾರ ಪಡೆಯಬಹುದು ಎಂದು ಪೊನ್ನಣ್ಣ ಹೇಳಿದರು.

ಇದನ್ನೂ ಓದಿ: ಮಗ ಪ್ರಜ್ವಲ್​ನನ್ನು ಭೇಟಿಯಾಗಲು ಪರಪ್ಪನ ಅಗ್ರಹಾರಕ್ಕೆ ಬಂದ ರೇವಣ್ಣ

1998 ರಲ್ಲಿ ಜಮೀನನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡಲಾಗಿತ್ತು. ನಿಂಗಣ್ಣ ಎನ್ನುವವರಿಗೆ ಆ ಜಮೀನು ಸೇರಿತ್ತು. 2004ರಲ್ಲಿ ಮಲ್ಲಿಕಾರ್ಜುನ ಸ್ವಾಮಿಗೆ ಸೇಲ್ ಡೀಡ್ ಆಗಿತ್ತು. ಮಲ್ಲಿಕಾರ್ಜುನ ಸ್ವಾಮಿ ಸಿಎಂ ಸಿದ್ದರಾಮಯ್ಯರ ಧರ್ಮ ಪತ್ನಿಯ ಸಹೋದರ. 2005ರಲ್ಲಿ ಮಲ್ಲಿಕಾರ್ಜುನ ಸ್ವಾಮಿ ಅದನ್ನು ವ್ಯವಸಾಯೇತರ ಜಮೀನಾಗಿ ಪರಿವರ್ತಿಸಿದ್ದರು. 2010ರಲ್ಲಿ ದಾನ ಪತ್ರದ ಮೂಲಕ ಅವರ ಸಹೋದರಿ ಪಾರ್ವತಿಯವರಿಗೆ ವರ್ಗಾವಣೆ ಆಗಿತ್ತು ಎಂದು ಪೊನ್ನಣ್ಣ ಮಾಹಿತಿ ನೀಡಿದರು.

2010 ರಲ್ಲಿ ಪಾರ್ವತಿಯವರಿಗೆ ಸೇರಿದ್ದ ಜಮೀನನ್ನು ಮುಡಾದವರು ನಿವೇಶನಕ್ಕಾಗಿ ಬಳಸಿಕೊಂಡಿರುತ್ತಾರೆ. 2014ರಲ್ಲಿ ಈ ಬಗ್ಗೆ ಮುಡಾ ದವರಿಗೆ ಪಾರ್ವತಿಯವರು ಪತ್ರ ಬರೆದಿದ್ದಾರೆ. ಮುಡಾದವರು ತಮ್ಮ ಜಮೀನು ಬಳಸಿಕೊಂಡಿದ್ದಾರೆ, ಅದಕ್ಕೆ ಪರಿಹಾರ ನೀಡಿ ಎಂದು ಕೇಳಿದ್ದಾರೆ. ಹೀಗಾಗಿ ಇದು ಬದಲಿ ನಿವೇಶನ ಅಲ್ಲ, ಇದು ಪರಿಹಾರ ರೂಪದ ನಿವೇಶನ. ಪರಿಹಾರದ ರೂಪದಲ್ಲಿ ಕೊಡಬೇಕಾದ ಹಣದ ಬದಲು ನಿವೇಶನ ನೀಡಲಾಗಿದೆ. 1-11-2014ರಲ್ಲಿ 50:50 ನಿಯಮ ಪ್ರಕಾರವೂ ಪರಿಹಾರ ನೀಡಿಲ್ಲ ಎಂದು ಅವರು ಹೇಳಿದ್ದಾರೆ.

RELATED ARTICLES

Related Articles

TRENDING ARTICLES