ಗೋವಾ: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಹಿಂದುತ್ವದ ಬಗ್ಗೆ ಹೇಳಿಕೆ ನೀಡುವ ಮೂಲಕ ಹಿಂದೂ ಧರ್ಮವನ್ನು ಅವಮಾನಿಸಿದ್ದಾರೆ. ಹಾಗಾಗಿ ಅವರು ವಿಶ್ವದಾದ್ಯಂತ ಇರುವ ಕೋಟ್ಯಂತರ ಹಿಂದೂಗಳಿಗೆ ಕ್ಷಮೆಯಾಚಿಸಬೇಕು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ವಾಗ್ದಾಳಿ ನಡೆಸಿದ್ದಾರೆ.
ರಾಹುಲ್ ಹೇಳಿಕೆ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಇಡೀ ಕಾಂಗ್ರೆಸ್ ‘ದ್ವೇಷ’ದ ಅಂಗಡಿಯಾಗಿದ್ದು, ಹಿಂದೂಗಳನ್ನು ‘ಹಿಂಸಾಚಾರಿಗಳು ಎಂದು ಕರೆಯುವ ಮೂಲಕ ರಾಹುಲ್ ಘೋರ ಅವಮಾನ ಮತ್ತು ಅಗೌರವ ತೋರಿದ್ದಾರೆ’ ಎಂದು ಸಾವಂತ್ ಟೀಕಿಸಿದ್ದಾರೆ. ಸನಾತನ ಧರ್ಮ ಅಥವಾ ಹಿಂದೂಗಳನ್ನು ಅಪಹಾಸ್ಯ ಮಾಡಿರುವ ಕಾಂಗ್ರೆಸ್ ಮತ್ತು ‘ಇಂಡಿಯಾ’ ಬಣದ ನಾಯಕರ ದುರಹಂಕಾರ ಅತ್ಯಂತ ಖಂಡನೀಯ’ ಎಂದು ಸಾವಂತ್ ಗುಡುಗಿದ್ದಾರೆ.
ಇದನ್ನೂ ಓದಿ: ನಾನು ಸದ್ಯಕ್ಕೆ ಪ್ರಜ್ವಲ್ ಭೇಟಿಗೆ ಹೋಗಲ್ಲ: ಹೆಚ್.ಡಿ ರೇವಣ್ಣ
ಲೋಕಸಭೆಯಲ್ಲಿ ಸೋಮವಾರ ಮಾತನಾಡಿದ್ದ ರಾಹುಲ್ ಗಾಂಧಿ, ‘ತಮ್ಮನ್ನು ತಾವು ಹಿಂದೂಗಳೆಂದು ಕರೆದುಕೊಳ್ಳುವವರು ಹಿಂಸಾಚಾರ ಹಾಗೂ ದ್ವೇಷದಲ್ಲಿ ಹಗಲಿರುಳು ನಿರತರಾಗಿದ್ದಾರೆ’ ಎಂದು ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು. ಈ ಹೇಳಿಕೆಗೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಸದನದಲ್ಲಿ ಕೋಲಾಹಲ ಉಂಟಾಗಿತ್ತು.