Sunday, June 30, 2024

ಹಾವೇರಿ ಅಪಘಾತದಲ್ಲಿ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ ಪರಿಹಾರ ಘೋಷಿಸಿದ ಸಿಎಂ

ಬೆಂಗಳೂರು: ಹಾವೇರಿಯಲ್ಲಿ ನಿಂತಿದ್ದ ಲಾರಿಗೆ ಟಿಟಿ ವಾಹನ ಗುದ್ದಿದ ಪರಿಣಾಮ ಟಿಟಿವಾಹನದಲ್ಲಿದ್ದ ಒಂದೇ ಕುಟುಂಬಕ್ಕೆ ಸೇರಿದ 13 ಮಂದಿ ಧಾರುಣ ಸಾವಿಗೀಡಾಗಿದ್ದಾರೆ. ಈ ಅಪಘಾತದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು ಮೃತರಿಗೆ ಪರಿಹಾರ ಘೋಷಿಸಿದ್ದಾರೆ.

ಅಪಘಾತದ ಕುರಿತು ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಪೋಸ್ಟ್​ನಲ್ಲಿ, ಹಾವೇರಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಶಿವಮೊಗ್ಗ ಜಿಲ್ಲೆ ಭದ್ರಾವತಿ ಮೂಲದ 13 ಮಂದಿ ಮೃತಪಟ್ಟ ಸುದ್ದಿ ತಿಳಿದು ನೋವಾಯಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ತಮ್ಮವರನ್ನು ಕಳೆದುಕೊಂಡ ದುಃಖತಪ್ತ ಕುಟುಂಬಗಳಿಗೆ ನನ್ನ ಸಂತಾಪಗಳು. – ಮುಖ್ಯಮಂತ್ರಿ @siddaramaiah ಎಂದು ಸಂತಾಪ ಸೂಚಿಸಿದ್ದಾರೆ. 

ಇದೇ ವೇಳೆ ಹಾವೇರಿ ಅಪಘಾತದಲ್ಲಿ ಮೃತಪಟ್ಟವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಲಾ 2 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.

ಇದನ್ನೂ ಓದಿ: ಭೀಕರ ಅಪಘಾತ: ಒಂದೇ ಕುಟುಂಬದ 13 ಮಂದಿ ದಾರುಣ ಸಾವು

ಘಟನೆ ಏನು?:

ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 13 ಮಂದಿ ದಾರುಣಸಾವಿಗೀಡಾಗಿರುವ ಘಟನೆ ಹಾವೇರಿ ಜಿಲ್ಲೆಯ ಗುಂಡೇನಹಳ್ಳಿ ಬಳಿ ನಡೆದಿದೆ. ಕಳೆದ 15-20 ದಿನಗಳ ಹಿಂದಷ್ಟೆ ಆದರ್ಶ್​ ಎಂಬಾತ ಖರೀದಿಸಿದ್ದ ಟೆಂಪೋ ಟ್ರಾವಲರ್​ಗೆ ಪೂಜೆ ಸಲ್ಲಿಸಿ ವಾಪಾಸ್​ ಆಗುವಾಗ ನಿಂತಿದ್ದ ಲಾರಿಗೆ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ 13 ಮಂದಿ ಉಸಿರು ಚೆಲ್ಲಿದ್ದಾರೆ. ಈ ಪೈಕಿ ವಾಹನ ಚಾಲಕ ಆದರ್ಶ್​ (23), 7 ಮಂದಿ ಮಹಿಳೆಯರು ಸೇರಿ ಒಟ್ಟು 13 ಮಂದಿ ಸಾವಿಗೀಡಾಗಿದ್ದಾರೆ.

​ಹೊಸದಾಗಿ ಖರೀದಿಸಿದ್ದ ಟೆಂಪೋನಲ್ಲಿ ಆದರ್ಶ್ ತನ್ನ ತಂದೆ ತಾಯಿ (ನಾಗೇಶ್ ಮತ್ತು ವಿಶಾಲಾಕ್ಷಿ) ಮತ್ತು ಇತರ ಸಂಬಂಧಿಕರೊಂದಿಗೆ ಮಹಾರಾಷ್ಟ್ರದ ತುಳಜಾಪುರದಲ್ಲಿರುವ ಕೆಲ ದೇವಸ್ಥಾನಗಳಿಗೆ ಭೇಟಿ ನೀಡಿ ಕೊನೆಗೆ ಸವದತ್ತಿ ಎಲ್ಲಮ್ಮನ ದರ್ಶನ ಮಾಡಿಕೊಂಡು ತಮ್ಮೂರು ಭದ್ರಾವತಿ ತಾಲ್ಲೂಕಿನ ಎಮ್ಮೆಹಟ್ಟಿ ವಾಪಸ್ಸಾಗುವಾಗ ಭೀಕರ ದುರಂತ ಸಂಭವಿಸಿದೆ.

ಆದರ್ಶ್ ಕಳೆದ 6-7 ವರ್ಷಗಳಿಂದ ಡ್ರೈವರ್ ನಾಗಿ ಕೆಲಸ ಮಾಡುತ್ತಿದ್ದ ಎಂದು ಅವರ ದೊಡ್ಡಪ್ಪನ ಮಗ ಸುಮಂತ್ ಹೇಳುತ್ತಾನೆ. ಹೊಸ ಗಾಡಿ ಕೊಂಡು ಬದುಕು ಕಟ್ಟಿಕೊಳ್ಳುವ ಕನಸು ಕಂಡಿದ್ದ ನಾಗೇಶ್ ನ ಜೀವನ ಹೀಗೆ ದುರಂತದಲ್ಲಿ ಕೊನೆಗೊಂಡಿದ್ದು ಅತ್ಯಂತ ದುರದೃಷ್ಟಕರ.

RELATED ARTICLES

Related Articles

TRENDING ARTICLES