ರಾಮನಗರ: ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ಬಗ್ಗೆ ಸಚಿವ ಕೆ.ಎನ್ ರಾಜಣ್ಣ ಅವಹೇಳನ ಮಾಡಿದ್ದಾರೆ ಎಂದು ರಾಮನಗರ ಜಿಲ್ಲಾ ಒಕ್ಕಲಿಗರ ಸಂಘ ಖಂಡಿಸಿದೆ.
ಜಿಲ್ಲೆಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಮುಖಂಡರು, ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಚಂದ್ರಶೇಖರ ಸ್ವಾಮೀಜಿ ಭಾಗಿಯಾಗಿದ್ದರು. ಈ ವೇಳೆ ಒಕ್ಕಲಿಗ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಸಿಎಂ ಬಳಿ ಮನವಿ ಮಾಡಿದ್ದಾರೆ. ಆದರೆ, ಸಚಿವ ಕೆ.ಎನ್.ರಾಜಣ್ಣ ನಮ್ಮ ಸ್ವಾಮೀಜಿಗಳನ್ನ ಹೀಯಾಳಿಸಿದ್ದಾರೆ. ನಮ್ಮ ಸ್ವಾಮೀಜಿ ಖಾವಿ ಬಿಚ್ಚಿ ರಾಜಕೀಯಕ್ಕೆ ಬನ್ನಿ ಅಂದಿದ್ದಾರೆ. ಇದು ಕೆ.ಎನ್.ರಾಜಣ್ಣ ಅವರ ಅರಕಲು ಬಾಯಿ ಸಂಸ್ಕೃತಿಯನ್ನು ತೋರಿಸುತ್ತದೆ. ಅವರ ಹೇಳಿಕೆಯನ್ನ ಒಕ್ಕಲಿಗ ಸಮುದಾಯ ಖಂಡಿಸುತ್ತೆ ಎಂದರು.
ಇದನ್ನೂ ಓದಿ: ಬೈಕ್ಗಳ ಮೇಲೆ ದರ್ಶನ್ ಖೈದಿ ನಂಬರ್ ಟ್ರೆಂಡಿಂಗ್: ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮದ ಎಚ್ಚರಿಕೆ
ಕೆ.ಎನ್.ರಾಜಣ್ಣ ಈ ಹಿಂದೆ ದೇವೇಗೌಡರ ಬಗ್ಗೆಯೂ ಅವಹೇಳನವಾಗಿ ಮಾತನಾಡಿದ್ದರು. ಈಗಲೂ ಹಾಲಿ ಡಿಸಿಎಂ ಡಿಕೆ ಶಿವಕುಮಾರ್ ಮೇಲೆ ಶಾಸಕರನ್ನ ಎತ್ತಿಕಟ್ಟುತ್ತಿದ್ದೀರಿ. ನಿಮಗೆ ಸನ್ಯಾಸಿ ಆಗಬೇಕು ಅನ್ನೋ ಆಸೆ ಇದ್ರೆ ನಮ್ಮ ಮಠದಲ್ಲಿ ಅವಕಾಶ ಕೊಡ್ತೀವಿ. ಎಲ್ಲವನ್ನೂ ತ್ಯಾಗಮಾಡಿ ಬನ್ನಿ ಸ್ವಾಮೀಜಿಗಳಾಗಿ, ಆದರೆ ಇಂತಹ ಮಾತುಗಳನ್ನ ನಾವು ಸಹಿಸಲ್ಲ ಎಂದರು.
ಸಚಿವ ಕೆ.ಎನ್.ರಾಜಣ್ಣ ಬೃಹನ್ನಳೆ ರೀತಿ ಆಡ್ತಾ ಇದ್ದಾರೆ. ಅವರು ಒಕ್ಕಲಿಗ ವಿರೋಧಿ ಎಂಬುದನ್ನ ತೋರಿಸುತ್ತಿದ್ದಾರೆ. ಈ ಕೂಡಲೇ ರಾಜಣ್ಣ ತಮ್ಮ ಹೇಳಿಕೆಯನ್ನ ವಾಪಸ್ಸ್ ಪಡೆಯಬೇಕು ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡುತ್ತೇನೆ ಎಂದು ಒಕ್ಕಲಿಗ ಸಂಘದಿಂದ ಎಚ್ಚರಿಕೆ ನೀಡಿದರು.