ಬೆಂಗಳೂರು: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣದಲ್ಲಿ ಇದೀಗ ಹನಿಟ್ರ್ಯಾಪ್ ಘಾಟು ಎದ್ದಿದೆ. ಗೋವಾ, ಹೈದರಾಬಾದ್ನಲ್ಲಿ ಹನಿ ತಿನ್ನಿಸಿ ಬಲೆಗೆ ಬೀಳಿಸಿಕೊಂಡಿದ್ದಾರೆ ಎಂದು ಪರಿಷತ್ ಸದಸ್ಯ ಸಿ.ಟಿ ರವಿ ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ವಾಲ್ಮೀಕಿ ನಿಗಮ ಬಹುಕೋಟಿ ಹಗರಣದ ಎ13 ಆರೋಪಿ ಸತ್ಯನಾರಾಯಣ ವರ್ಮಾ ಸಹ ಈ ಪ್ರಕರಣದ ಕಿಂಗ್ ಪಿನ್. ಈತನಿಗೆ ರಾಜ್ಯದವರೇ ಸಹಕರಿಸಿದ್ದಾರೆ. ಗೋವಾದಲ್ಲಿ, ಹೈದರಾಬಾದ್ನಲ್ಲಿ ಹನಿ ತಿನ್ನಿಸಿ ಬಲೆಗೆ ಕೆಡವಿದ್ದಾರೆ ಎಂದು ಹೇಳಿದ್ದಾರೆ.
ಸತ್ಯನಾರಾಯಣ ಇವತ್ತು ಕೋರ್ಟ್ ನಲ್ಲಿ ಏನೇ ಹೇಳ್ತಿದ್ರೂ ನಾವು ಪರ ಮಾತಾಡಲ್ಲ. ಯಾಕಂದರೆ ಕೆಲ ರಾಜ್ಯಗಳಲ್ಲಿ ಇಂಥದ್ದೇ ಪ್ರಕರಣದಲ್ಲಿ ಸತ್ಯನಾರಾಯಣ ವರ್ಮಾನ ಪಾತ್ರ ಇದೆ ಅನ್ನೋ ಮಾಹಿತಿ ನಮಗಿದೆ. ಸತ್ಯನಾರಾಯಣ ಒಬ್ಬ ವೃತ್ತಿ ಪರ ಡ್ಯಾಶ್ ಎಂದು ಸಿ.ಟಿ ರವಿ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಬಳ್ಳಾರಿ ಜಿಲ್ಲಾ ನೂತನ ಉಸ್ತುವಾರಿಯಾಗಿ ಸಚಿವ ಜಮೀರ್ ಅಹ್ಮದ್ ನೇಮಕ
13ನೇ ಆರೋಪಿ ಸತ್ಯನಾರಾಯಣ ವರ್ಮಾ ಶಾಮೀಲು ಇದೆ ಎನ್ನಲಾಗ್ತಿದೆ. ಈಗ ಇದೇ ಸತ್ಯನಾರಾಯಣ ವರ್ಮಾ ನಾಗೇಂದ್ರ ವಿರುದ್ಧ ಬೆದರಿಕೆ ಆರೋಪ ಮಾಡ್ತಾರೆ. ಈ ನಿಟ್ಟಿನಲ್ಲಿ ತನಿಖೆ ಆಗಿದೆಯಾ?. ನಾಗೇಂದ್ರ ಅವರ ಮೌಖಿಕ ಸೂಚನೆ ನೆಕ್ಕುಂಟಿ ನಾಗರಾಜ್ ನಿರ್ದೇಶನದಲ್ಲಿ ಪದ್ಮರಾಜ್ ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ. ನೆಕ್ಕುಂಟಿ ನಾಗರಾಜ್ ಸಂಬಂಧಿ ನಾಗೇಶ್ ಖಾತೆಗೂ ಹಣ ಹೋಗಿದೆ. ಈಗ ನಾಗೇಶ್ ಖಾತೆ ಸೀಜ್ ಮಾಡಲಾಗಿದೆ. ನಾಗರಾಜ್ ಪತ್ನಿ ಧನಲಕ್ಷ್ಮಿ, ಪುತ್ರಿ ಸಹೋದರ ರವಿಕುಮಾರ್ ಖಾತೆಗೂ ನಿಗಮದ ಹಣ ವರ್ಗಾವಣೆ ಆಗಿದೆ. ಈ ಹಿನ್ನೆಲೆಯಲ್ಲಿ ತನಿಖೆ ಆಗಿದೆಯಾ?, ನಾಗೇಂದ್ರ ಮತ್ತು ಬಸವರಾಜ್ ದದ್ದಲ್ ವಿರುದ್ಧ ಯಾಕೆ ಎಫ್ಐಆರ್ ಹಾಕಿಲ್ಲ ಎಂದು ಪ್ರಶ್ನಿಸಿದರು.
700 ಖಾತೆಗಳಿಗೆ ನಿಗಮದ ಹಣ ಹೋಗಿದೆ. ಅಲ್ಲಿಂದ ನಂತರ ಎಲ್ಲಿಗೆ ಹೋಯಿತು ಅಂತ ತನಿಖೆ ಆಗಬೇಕು. ಎರಡು ತನಿಖೆ ಬದಲು ಸಿಬಿಐಯಿಂದನೇ ಸಮಗ್ರ ತನಿಖೆ ಮಾಡಿಸಲಿ. ನಿಗಮದ ಅಕ್ರಮ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಇದೇ ವೇಳೆ ಸಿಟಿ ರವಿ ಆಗ್ರಹಿಸಿದರು.
ಸಿಎಂ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು. ಸರ್ಕಾರದ ಈ ತನಿಖೆ ಮೇಲೆ ನಮಗೆ ನಂಬಿಕೆ ಇಲ್ಲ. ಸರ್ಕಾರದಿಂದ ಸಮಗ್ರ ತನಿಖೆಗೆ ಇನ್ನೂ ಯಾಕೆ ಸಿಬಿಐಗೆ ಕೊಟ್ಟಿಲ್ಲ?. ಯೂನಿಯನ್ ಬ್ಯಾಂಕ್ ಪತ್ರ ಬರೆಯಿತು ಅಂತ ಸಿಬಿಐ ಎಂಟ್ರಿ ಆಗಿದೆ. ಆದರೆ ಆವತ್ತೇ ಸಿಬಿಐಗೆ ಸಮಗ್ರ ತನಿಖೆಗೆ ಕೊಡಬೇಕಿತ್ತು. ಸರ್ಕಾರದ ಮೇಲೆ ನಮಗೆ ಅನುಮಾನವಿದೆ. ಛತ್ತೀಸ್ಗಢದಲ್ಲೂ ಹಿಂದೆ ಕಾಂಗ್ರೆಸ್ ಅವಧಿಯಲ್ಲಿ ಇಂಥದ್ದೇ ಅಕ್ರಮ ಆಗಿದೆ ಅನ್ನೋ ಆರೋಪ ಇದೆ ಎಂದರು.