ಜಾರ್ಖಂಡ್: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೇನ್ಗೆ ಕೊನೆಗೂ ಜಾಮೀನು ದೊರಕಿದೆ. ಜಾರಿ ನಿರ್ದೇಶನಾಲಯ ಜಾರ್ಖಂಡ್ ಮುಕ್ತಿ ಮೋರ್ಚಾ ಮುಖ್ಯಸ್ಥ ಹೇಮಂತ್ ಸೊರೇನ್ ಅವರನ್ನು ಜನವರಿ 31 ರಂದು ಬಂಧನ ಮಾಡಿತ್ತು. ಹೇಮಂತ್ ಸೊರೇನ್ಗೆ ಜಾರ್ಖಂಡ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಹೇಮಂತ್ ಸೊರೇನ್ ಪರ ವಾದ ಮಂಡಿಸಿದ ವಕೀಲರಾದ ಅರುಣಾಭ್ ಚೌದರಿ, ಮೇಲ್ನೋಟಕ್ಕೆ ಹೇಮಂತ್ ಸೊರೇನ್ ತಪ್ಪಿತಸ್ಥರು ಎಂದು ಸಾಬೀತಾಗುತ್ತಿಲ್ಲ. ಜಾಮೀನು ಅವಧಿಯಲ್ಲಿ ಆರೋಪಿ ಯಾವುದೇ ಲೋಪ ಎಸಗುವುದಿಲ್ಲ ಎಂದು ಕಂಡು ಬರುತ್ತಿದೆ. ಈ ಹಿನ್ನೆಲೆ ಜಾಮೀನು ನೀಡಲಾಗಿದೆ ಎಂದು ನ್ಯಾಯಾಲಯ ಹೇಳಿರೋದಾಗಿ ಮಾಹಿತಿ ನೀಡಿದರು.
ಇದನ್ನೂ ಓದಿ: ರಾಜ್ಯದ ತೆರಿಗೆ ಹಣ ಹಂಚಿಕೆ ತಾರತಮ್ಯ, ಪ್ರತಿಭಟನೆ ಸುಳಿವು ನೀಡಿದ ಸಿಎಂ ಸಿದ್ದರಾಮಯ್ಯ
ಹೇಮಂತ್ ಸೊರೇನ್ ದಾಖಲೆಗಳನ್ನು ತಿದ್ದುಪಡಿ ಮಾಡುವ ಅಕ್ರಮ ದಂಧೆ ನಡೆಸುತ್ತಿದ್ದರು ಎಂದು ಜಾರಿ ನಿರ್ದೇಶನಾಲಯ ಆರೋಪ ಮಾಡಿತ್ತು. ಜೊತೆಗೆ ರಾಂಚಿಯಲ್ಲಿ 8.86 ಕೋಟಿ ರೂ. ಮೌಲ್ಯದ ಭೂಮಿಯನ್ನು ಅಕ್ರಮವಾಗಿ ಪಡೆಯಲು ನಕಲಿ ಹಣ ವರ್ಗಾವಣೆ ಹಾಗೂ ಖೋಟಾ ದಾಖಲೆಗಳನ್ನು ಸಿದ್ದಪಡಿಸುತ್ತಿದ್ದರು ಎಂದು ಇಡಿ ಆರೋಪ ಮಾಡಿತ್ತು. ಬಂಧನವಾಗ್ತಿದ್ದಂತೆ ಜಾರ್ಖಂಡ್ ಸಿಎಂ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದರು.
ಸದ್ಯ ಹೇಮಂತ್ ಸೊರೇನ್ಗೆ ಜಾರ್ಖಂಡ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.