ಬೆಂಗಳೂರು: ಕರ್ನಾಟಕದಲ್ಲಿ ಕೇವಲ 2 ತಿಂಗಳ ಅವಧಿಯಲ್ಲಿ ನಾಲ್ವರು ವಿಐಪಿಗಳ ಬಂಧನವಾಗಿದೆ. ಈ ನಾಲ್ಕು ಹೈ ಪ್ರೊಫೈಲ್ ಪ್ರಕರಣಗಳು ರಾಜ್ಯವನ್ನೇ ಬೆಚ್ಚಿಬೀಳಿಸಿವೆ. ಒಂದೇ ತಿಂಗಳಲ್ಲಿ ಜೈಲು ಕಂಬಿ ಎಣಿಸಿದ ರಾಜ್ಯದ ನಾಲ್ವರು ಗಣ್ಯವ್ಯಕ್ತಿಗಳಲ್ಲಿ ಮೂವರು ಜನಪ್ರತಿನಿಧಿಗಳಾದರೆ, ಒಬ್ಬರು ಸ್ಟಾರ್ ನಟ. ಈ ನಾಲ್ವರಲ್ಲಿ ಇಬ್ಬರು ಜೈಲಿನಲ್ಲಿ, ಒಬ್ಬರು ಎಸ್ಐಟಿ ಕಸ್ಟಡಿ ಹಾಗೂ ಒಬ್ಬರು ಜಾಮೀನಿನ ಮೇಲೆ ಹೊರಗಡೆ ಇದ್ದಾರೆ.
ಕಿಡ್ನಾಪ್ ಪ್ರಕರಣದಲ್ಲಿ ಮಾಜಿ ಸಚಿವ ರೇವಣ್ಣ:
ಹಾಸನದ ಹೊಳೆನರಸೀಪುರ ಕ್ಷೇತ್ರ ಶಾಸಕ ಹಾಗು ಮಾಜಿ ಸಚಿರ ಹೆಚ್.ಡಿ ರೇವಣ್ಣ ಅವರು ಮಹಿಳೆಯ ಅಪಹರಣ ಪ್ರಕರಣದಲ್ಲಿ ಜೈಲು ಸೇರಿ ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ. ಮೇ 4ರಂದು ರೇವಣ್ಣರನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದರು. 6 ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಮಾಜಿ ಸಚಿವ ಮೇ 13ರಂದು ಜಾಮೀನು ಪಡೆದು ಹೊರಬಂದಿದ್ದಾರೆ.
ಅಶ್ಲೀಲ ವಿಡಿಯೋ, ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ಬಂಧನ:
ಅತ್ಯಾಚಾರ ಕೇಸ್ನಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ಬಂಧನವಾಗಿದೆ. ಮೇ 30ರಂದು ಬೆಂಗಳೂರು ವಿಮಾನ ನಿಲ್ದಾಣದಲ್ಲೇ ವಿದೇಶದಿಂದ ಬರುತ್ತಿದ್ದಾಗ ಪ್ರಜ್ವಲ್ ರೇವಣ್ಣ ಬಂಧನವಾಗಿತ್ತು. ಒಟ್ಟು ಮೂರು ಪ್ರಕರಣಗಳನ್ನು ಅವರು ಎದುರಿಸುತ್ತಿದ್ದಾರೆ. ಸದ್ಯ ಪ್ರಜ್ವಲ್ ರೇವಣ್ಣ SIT ಕಸ್ಟಡಿಯಲ್ಲಿದ್ದಾರೆ. ಒಂದರ ನಂತರ ಒಂದು ಕೇಸ್ನಲ್ಲಿ SIT ಕಸ್ಟಡಿಗೆ ಪಡೆಯುತ್ತಿದೆ. ಇಂದು ಮೂರನೇ ಕೇಸ್ನಲ್ಲಿ SIT ಕಸ್ಟಡಿ ಅಂತ್ಯವಾಗಲಿದ್ದು, ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರುವ ಸಾಧ್ಯತೆ ಇದೆ.
ಇದನ್ನೂ ಓದಿ:ದರ್ಶನ್, ಭವಾನಿ, ಪ್ರಜ್ವಲ್, ಸೂರಜ್ ಫೋಟೋ ವೈರಲ್
ಕೊಲೆ ಕೇಸ್ನಲ್ಲಿ ಖ್ಯಾತ ನಟ ದರ್ಶನ್ ಜೈಲುಪಾಲು:
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬ ವ್ಯಕ್ತಿಯ ಕಿಡ್ನಾಪ್ ಮತ್ತು ಕೊಲೆ ಪ್ರಕರಣದಲ್ಲಿ ಸ್ಯಾಂಡಲ್ವುಡ್ನ ಖ್ಯಾತ ನಟ ದರ್ಶನ್ ಜೈಲುಪಾಲಾಗಿದ್ದಾರೆ. 14 ದಿನ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿರುವ ನಟ ದರ್ಶನ್ರನ್ನು ಜೂನ್ 11ರಂದು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದರು. ಪ್ರಕರಣದಲ್ಲಿ ಒಟ್ಟು 17 ಜನರ ಬಂಧನವಾಗಿದೆ.
ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಸೂರಜ್ಗೆ ಜೈಲು
ವಿಧಾನ ಪರಿಷತ್ ಸದಸ್ಯ ಹಾಗು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರ ಮತ್ತೊಬ್ಬ ಮೊಮ್ಮಗ ಡಾ. ಸೂರಜ್ ರೇವಣ್ಣ ಯುವಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಜೈಲುಪಾಲಾಗಿದ್ದಾರೆ. ಹಾಸನದಲ್ಲಿ ಭಾನುವಾರ ಸೂರಜ್ ರೇವಣ್ಣರನ್ನು ಪೊಲೀಸರು ಬಂಧಿಸಿದ್ದರು. ಸದ್ಯ ನ್ಯಾಯಾಲಯದ 14 ದಿನ ನ್ಯಾಯಾಂಗ ಬಂಧನ ವಿಧಿಸಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.