ಹೈದರಾಬಾದ್: ಭಾರತದ ಮಾಧ್ಯಮ ಲೋಕದ ದಿಗ್ಗಜ, ಈನಾಡು ಗ್ರೂಪ್ ಅಧ್ಯಕ್ಷರಾದ ಪದ್ಮವಿಭೂಷಣ ರಾಮೋಜಿ ರಾವ್ ಅವರು ತೀವ್ರ ಅನಾರೋಗ್ಯದಿಂದ ಹೈದರಾಬಾದ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶನಿವಾರ ಮುಂಜಾನೆ ನಿಧನರಾದರು.
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಇದೇ ತಿಂಗಳ 5ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾಮೋಜಿ ಅವರಿಗೆ ವೈದ್ಯರು ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದರು. ಹೃದಯ ಸಂಬಂಧಿ ಸಮಸ್ಯೆಯಿಂದ ಹೈದರಾಬಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಇಹಲೋಕ ತ್ಯಜಿಸಿದ್ದಾರೆ.
ರಾಮೋಜಿ ರಾವ್ ನಿಧನಕ್ಕೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ತೆಲಗು ಚಿತ್ರರಂಗದ ತಾರೆಯರು ಸೇರಿದಂತೆ ದೇಶದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ನಿಜವಾಯ್ತು ಶ್ರೀಗಳ ಕಾಲಜ್ಞಾನ ಭವಿಷ್ಯ!
ರಾಮೋಜಿ ರಾವ್ ಅವರು ನವೆಂಬರ್ 16, 1936 ರಂದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪೆದಪರುಪುಡಿಯಲ್ಲಿ ಜನಿಸಿದ್ದರು. 1969ರಲ್ಲಿ ಅನ್ನದಾತ ಪತ್ರಿಕೆ ಆರಂಭಿಸುವ ಮೂಲಕ ಅವರು ಮಾಧ್ಯಮ ಕ್ಷೇತ್ರಕ್ಕೆ ಕಾಲಿಟ್ಟರು. ಬಳಿಕ ಈನಾಡು ದಿನಪತ್ರಿಕೆ ಮೂಲಕ ತೆಲುಗು ಪತ್ರಿಕಾ ಲೋಕದಲ್ಲಿ ಕ್ರಾಂತಿ ಹುಟ್ಟು ಹಾಕಿದರು. 10 ಆಗಸ್ಟ್, 1974 ರಂದು ವಿಶಾಖಪಟ್ಟಣಂನಲ್ಲಿ ಪತ್ರಿಕೆ ಆರಂಭಿಸಿದ್ದರು. ತೆಲುಗು ಪತ್ರಿಕೋದ್ಯಮ ಲೋಕದಲ್ಲಿ ‘ಈನಾಡು’ ಹೊಸ ಯುಗಕ್ಕೆ ನಾಂದಿ ಹಾಡಿತು. ಆರಂಭವಾದ ನಾಲ್ಕೇ ವರ್ಷಗಳಲ್ಲಿ ಈನಾಡು ಓದುಗರ ಅಚ್ಚುಮೆಚ್ಚಿನ ದಿನಪತ್ರಿಕೆಯಾಗಿ ಹೊರಹೊಮ್ಮಿತು. ಜೊತೆಗೆ ಸಿತಾರಾ ಸಿನಿಪತ್ರಿಕೆಯೂ ಕೂಡ ರಾಮೋಜಿ ಅವರ ಪ್ರಮುಖ ಮೈಲಿಗಲ್ಲು ಆಗಿದೆ. ಜೊತೆಗೆ ರಾಮೋಜಿ ರಾವ್ ಅವರು ಅದ್ಭುತ ಫಿಲ್ಮ್ಸಿಟಿ ನಿರ್ಮಿಸಿದ್ದು, ತೆಲುಗು ಜನರ ಹೃದಯದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ.
ಗುರಿ ಸಾಧನೆಗೆ ದಶಕಗಳ ಕಾಲ ಅವಿರತವಾಗಿ ಶ್ರಮಿಸಿದ ಯೋಧ ರಾಮೋಜಿ ರಾವ್ ಅವರಾಗಿದ್ದಾರೆ. ರೈತನ ಮಗನಾಗಿ ಹುಟ್ಟಿ ಬೆಳೆದ ರಾಮೋಜಿ ರಾವ್ ಅವರು ಯಶಸ್ವಿ ಉದ್ಯಮಿಯಾಗಿ, ಮಾಧ್ಯಮ ಸಾಮ್ರಾಜ್ಯವನ್ನೇ ಕಟ್ಟಿ ಬೆಳೆಸಿದವರು. ಈಟಿವಿ ಸುದ್ದಿ ವಾಹಿನಿ ಮೂಲಕ ಮಾಧ್ಯಮ ಜಗತ್ತಿನಲ್ಲಿ ದಿಗ್ಗಜರಾಗಿ ಪ್ರಖ್ಯಾತರಾದರು.