ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿ ತನಿಖೆಯಿಂದ ತಪ್ಪಿಸಿಕೊಳ್ಳಲು ವಿದೇಶಕ್ಕೆ ಹಾರಿರುವ ಪ್ರಜ್ವಲ್ ರೇವಣ್ಣ ಅವರ ದೇಶಾಂತರ ವಾಸಕ್ಕೆ ಒಂದು ತಿಂಗಳು ಪೂರ್ಣವಾಗಿದೆ.
ಇನ್ನೂ ಅವರು ದೇಶಕ್ಕೆ ಹಿಂದಿರುಗುವ ಯಾವ ಸುಳಿವನ್ನೂ ಕಾಣಿಸಿಲ್ಲ. ಮೂರು ಕೇಸ್ ದಾಖಲಾದರೂ ತಲೆ ಕೆಡಿಸಿಕೊಳ್ಳದ ಪ್ರಜ್ವಲ್ ತಂದೆ ಎಚ್.ಡಿ ರೇವಣ್ಣ ಅವರ ಬಂಧನವಾದ್ರೂ ಹಿಂದಿರುಗಿಲ್ಲ. ಚಿಕ್ಕಪ್ಪ, ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಮನವಿಗೂ ಡೋಂಟ್ ಕೇರ್ ಎಂದಿದ್ದಾರೆ.
ಇದನ್ನೂ ಓದಿ: ಅಶ್ಲೀಲ ವಿಡೀಯೊ ಪ್ರಕರಣ: ವಿದೇಶಾಂಗ ಸಚಿವಾಲಯದಿಂದ ಪ್ರಜ್ವಲ್ಗೆ ಶೋಕಾಸ್ ನೋಟಿಸ್
ತಾತ, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಎಚ್ಚರಿಕೆಗೂ ಸೊಪ್ಪುಹಾಕಿಲ್ಲ. ಕೂಡಲೇ ಹಿಂದಿರುಗಿ ಬಾರದಿದ್ದರೆ ಕುಟುಂಬದಲ್ಲಿ ಒಂಟಿಯಾಗಬೇಕಾಗುತ್ತದೆ ಎಂದು ದೇವೇಗೌಡರು ಎಚ್ಚರಿಸಿದ್ದರೂ ಪ್ರಜ್ವಲ್ ತುಟಿ ಪಿಟಕ್ ಎಂದಿಲ್ಲ.
ಪ್ರಜ್ವಲ್ ರೇವಣ್ಣ SIT ತನಿಖೆಯಿಂದ ತಪ್ಪಿಸಿಕೊಳ್ಳಲು ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಹಿನ್ನೆಲೆ ಪ್ರಜ್ವಲ್ ಅವರ ರಾಜ ತಾಂತ್ರಿಕ ಪಾಸ್ ಪೋರ್ಟ್ನ್ನು ರದ್ದುಪಡಿಸುವಂತೆ ಕೋರಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದೇಶಾಂಗ ಸಚಿವಾಲಯ ಹಾಗು ಪ್ರಧಾನಮಂತ್ರಿಗಳಿಗೆ ಪತ್ರದ ಮುಖೇನ ಎರಡು ಬಾರಿ ಮನವಿ ಮಾಡಿಕೊಂಡಿದ್ದು ಇದೀಗ ಪಾಸ್ ಪೋರ್ಟ್ ರದ್ದು ಮಾಡುವ ಪ್ರಕ್ರಿಯೆಯನ್ನು ವಿದೇಶಾಂಗ ಸಚಿವಾಲಯ ಆರಂಭಿಸಿದೆ.