ಬೆಂಗಳೂರು : ಹೇಳಿ ಕೇಳಿ ಇದು ದುಡ್ಡಿನ ದುನಿಯಾ. ದುಡ್ಡು ಬೇಕೇ ಬೇಕು, ದುಡ್ಡಿಲ್ಲ ಅಂದ್ರೆ ಯಾರೂ ಮೂಸಿಯೂ ನೋಡಲ್ಲ. ಬಡ-ಬಗ್ಗರು ನೂರು ರೂಪಾಯಿ ದುಡಿಯೋಕೂ ಕಷ್ಟಬೀಳ್ತಾರೆ. ಅದೇ ಕೆಲವರು ಅಕ್ರಮವಾಗಿ, ಕದ್ದುಮುಚ್ಚಿ ಕಂತೆ ಕಂತೆ ಕೂಡಿಟ್ಟಿರ್ತಾರೆ. ಅದೇ ರೀತಿ ಇವತ್ತು ಐಟಿ ಇಲಾಖೆ ಭರ್ಜರಿ ಬೇಟೆಯಾಡಿದೆ.
ದುಡ್ಡು ದುಡ್ಡು ದುಡ್ಡು.. ಎಲ್ನೋಡಿದ್ರೂ ಕಂತೆ ಕಂತೆ ನೋಟು. ಲಕ್ಷ್ಮಿ ಕಾಲು ಮುರಿದುಕೊಂಡು ಬಿದ್ದಿದ್ದಾಳೆ ಅಂತಾರಲ್ಲ. ಆ ಮಾತು ಈ ದುಡ್ಡನ್ನು ನೋಡಿದಾಗ ನೆನಪಾಗುತ್ತೆ. ದುಡ್ಡಿದ್ರೆ ದುನಿಯಾ ಅನ್ನೋ ಪ್ರಪಂಚದಲ್ಲಿ ದುಡ್ಡೇ ದೊಡ್ಡಪ್ಪ. ಆದರೆ, ಅದೇ ಅಕ್ರಮವಾಗಿ ಕೂಡಿಟ್ಟರೆ, ಮೋಸ ಮಾಡಿ ಕೂಡಿಟ್ಟರೆ ಅದು ಐಟಿ ಇಲಾಖೆ ಪಾಲಾಗುತ್ತೆ ಅನ್ನೋದಕ್ಕೆ ಇದೇ ಸಾಕ್ಷಿ.
ಚೀಲಗಳಲ್ಲಿ ತುಂಬಿ ಅವಿತಿಟ್ಟಿರೋ ಗರಿಗರಿ ನೋಟು. ಅದು ಒಂದಲ್ಲ, ಎರಡಲ್ಲ ಸ್ವಾಮಿ. ಬರೋಬ್ಬರಿ 26 ಕೋಟಿ ಹಣ. ಹೌದು, ಅಂದಹಾಗೆ, ಮಹಾರಾಷ್ಟ್ರದ ನಾಸಿಕ್ನಲ್ಲಿ ಐಟಿ ಅಧಿಕಾರಿಗಳ ತಂಡ ಭರ್ಜರಿ ಬೇಟೆಯಾಡಿದೆ. ಮುಂಬೈನ ಪ್ರಖ್ಯಾತ ಜ್ಯುವೆಲ್ಲರಿ ಶಾಪ್ ಒಂದರ ಮೇಲೆ ಧಿಡೀರ್ ದಾಳಿ ನಡೆಸಿತ್ತು. ಕೋಟಿ ಕೋಟಿ ಹಣ ಮತ್ತು ಚಿನ್ನಾಭರಣವನ್ನ ವಶಪಡಿಸಿಕೊಳ್ಳಲಾಗಿದೆ.
ಬರೋಬ್ಬರಿ 26 ಕೋಟಿ ನಗದು ವಶ
ಸುಮಾರು ಚೀಲಗಳಲ್ಲಿ ಕೋಟ್ಯಂತರ ರೂಪಾಯಿ ತುಂಬಿಟ್ಟಿದ್ದನ್ನ ಕಂಡು ಅರೆಕ್ಷಣ ಐಟಿ ಅಧಿಕಾರಿಗಳೇ ಶಾಕ್ ಆಗಿದ್ರು. ಈ ದಾಳಿಯಲ್ಲಿ ಬರೋಬ್ಬರಿ 26 ಕೋಟಿ ನಗದು ವಶಪಡಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಮುಂಬೈ ಮೂಲದ ಸುರಾನ ಎಂಬ ಚಿನ್ನಾಭರಣಗಳ ಮಳಿಗೆಯ ಮೇಲೆ ಈ ದಾಳಿ ನಡೆಸಲಾಗಿದೆ. ಇಲ್ಲಿ ಅಕ್ರಮ ಹಣ ವರ್ಗಾವಣೆ ನಡೆಯುತ್ತಿದೆ ಎಂಬ ಮಾಹಿತಿಯನ್ನ ಆಧರಿಸಿ ಐಟಿ ಟೀಂ ಈ ಕಾರ್ಯಾಚರಣೆ ಕೈಗೊಂಡಿದೆ.
90 ಕೋಟಿ ಮೌಲ್ಯದ ಬೇನಾಮಿ ಆಸ್ತಿ
ಹೀಗೆ, ವಶಪಡಿಸಿಕೊಂಡ ಅಷ್ಟು ದುಡ್ಡನ್ನು ಟೇಬಲ್ ಮೇಲೆಲ್ಲಾ ಕಂತೆ ಕಂತೆ ಜೋಡಿಸಿ ಕೌಂಟ್ ಮಾಡಲಾಗಿದೆ. ವಿಶೇಷ ಅಂದ್ರೆ, ಸುರಾನ ಜ್ಯುವೆಲರಿಯವರು ಎಷ್ಟು ಚಾಣಾಕ್ಷರು ಅಂದ್ರೆ, ಕೋಟಿ ಕೋಟಿ ಹಣವನ್ನು ಫರ್ನಿಚರ್ಗಳಲ್ಲಿ ರಹಸ್ಯವಾಗಿ ಬಚ್ಚಿಟ್ಟಿದ್ರು. ದುಡ್ಡು ಬಚ್ಚಿಡಲು ಫರ್ನಿಚರ್ಗಳಲ್ಲಿ ರಹಸ್ಯ ಬಾಕ್ಸ್ ಮಾಡಿಸಿದ್ದು ಪತ್ತೆಯಾಗಿದೆ. 90 ಕೋಟಿ ಮೌಲ್ಯದ ಬೇನಾಮಿ ಆಸ್ತಿ ಪತ್ರಗಳು ಸಹ ಐಟಿ ವಶಪಡಿಸಿಕೊಂಡಿದ್ದು, ಸುರಾನಾ ಜ್ಯುವೆಲರಿ ಮಾಲೀಕರ ಅಂಗಡಿ, ಮನೆಗಳನ್ನ ಜಾಲಾಡಿದೆ.