ಮೈಸೂರು: ಕುಮಾರಸ್ವಾಮಿ ಅಣ್ಣನ ಮಗ ರೇಪ್, ಸೆಕ್ಷ್ಯುವಲ್ ಹರಾಸ್ಮೆಂಟ್ ಮಾಡಿದ್ದಾನೆ, ಇಲ್ಲಿ ವೀಡಿಯೋ ಬಿಡುಗಡೆ ಮಾಡಿರುವುದು ಮುಖ್ಯವಲ್ಲ, ರೇಪ್ ಮಾಡಿದ್ದಾರೆ ಅದು ದೊಡ್ಡ ಅಪರಾಧ, ಪ್ರಕರಣದ ತನಿಖೆಯನ್ನು ದಾರಿ ತಪ್ಪಿಸಲು ಕುಮಾರಸ್ವಾಮಿ ಏನೇನೋ ಮಾತನಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಚ್ಡಿಕೆ ವಿರುದ್ದ ಕಿಡಿಕಾರಿದರು.
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ಮೈಸೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಹೆಚ್ಡಿಕೆ ಅಣ್ಣನ ಮಗ ರೇಪ್ ಮಾಡಿದ್ದಾನೆ. ಈ ನೆಲದ ಕಾನೂನಿಗೆ ಗೌರವ ಕೊಡಲೇಬೇಕು. ಲೈಂಗಿಕ ದೌರ್ಜನ್ಯ, ಅತ್ಯಾಚಾರ ಮಾಡಿದ್ದಾರೆ. ವಿಡಿಯೋ ಮಾಡಿದ್ದು, ಬಿಡುಗಡೆ ಮಾಡಿರೋದು ಮುಖ್ಯ ಅಲ್ಲ. ರೇಪ್ ಮಾಡಿರೋದು ದೊಡ್ಡ ಅಪರಾಧ ಎಂದರು.
ಇದನ್ನೂ ಓದಿ: ಅಂತ್ಯಸಂಸ್ಕಾರ ವೇಳೆ ಕಣ್ಣುಬಿಟ್ಟ ಮೃತ ಬಾಲಕ: ಇದು ಮುರ್ತಜಾ ಖಾದ್ರಿ ಪವಾಡ ಎಂದ ಪೋಷಕರು
ಇದುವರೆಗೆ ಎಷ್ಟು ಸಂತ್ರಸ್ತೆಯರು ದೂರು ನೀಡಿದ್ದಾರೆ ಎನ್ನುವುದು SIT ಬಳಿ ಮಾಹಿತಿ ಇದೆ. ಒಂದು ರಾಜ್ಯದ ಚುನಾಯಿತ ಮುಖ್ಯಮಂತ್ರಿ ಬರೆದಿರುವ ಪತ್ರಗಳಿಗೆ ಪ್ರಧಾನಮಂತ್ರಿಗಳು ಸ್ವಾಭಾವಿಕವಾಗಿ ಉತ್ತರ ಕೊಡುತ್ತಾರೆ ಎನ್ನುವ ನಂಬಿಕೆ ಇದೆ. ಈಗಾಗಲೇ ಡಿಪ್ಲೊಮಾಟಿಕ್ ಪಾಸ್ಪೋರ್ಟ್ ರದ್ದುಮಾಡುವಂತೆ ಕೋರಿ ಬರೆದಿರುವ ಮೊದಲೇ ಪತ್ರಕ್ಕೆ ಉತ್ತರ ಕೊಟ್ಟಿಲ್ಲ, ಎರಡನೇ ಪತ್ರಕ್ಕೆ ಉತ್ತರ ಕೊಡುತ್ತಾರೋ ಇಲ್ವೋ ನೋಡೊಣ ಎಂದರು.
ಪ್ರಜ್ವಲ್ ಸಂಸದನಾಗಿದ್ದಾಗಿನಿಂದಲೂ ನನ್ನ ಸಂಪರ್ಕದಲ್ಲಿಲ್ಲ ಎಂದು ಎಂದು ಕುಮಾರಸ್ವಾಮಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ರೇವಣ್ಣ, ದೇವೇಗೌಡರಿಗೆ ಗೊತ್ತಿಲ್ಲದೇ ವಿದೇಶಕ್ಕೆ ಹೋಗಿದ್ದಾನಾ? ಪ್ರಚಾರದ ವೇಳೆ ಸಂಸದ ಪ್ರಜ್ವಲ್, ರೇವಣ್ಣನ ಮಗ ಅಲ್ಲ ನನ್ನ ಮಗ ಅಂಥ ತಿಳ್ಕೊಳಿ ಎಂದು ಹೇಳಿದ್ದು ಸಂಪರ್ಕವಲ್ಲವಾ ಎಂದು ಪ್ರಶ್ನೆ ಮಾಡಿದರು.