ಹಾಸನ: ಅನ್ಯಾಯವಾಗಿರುವ ಸಂತ್ರಸ್ತರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಆಗಬೇಕು ಇದನ್ನು ರಾಜಕೀಯ ದೊಂಬರಾಟ ಮಾಡಿಕೊಂಡು ದಿನ ನಿತ್ಯ ಟಿವಿ ಮುಂದೆ ಬಂದು ಕಥೆ ಕಟ್ಟಿ ಹೇಳುವುದಲ್ಲ ಎಂದು ಪರೋಕ್ಷವಾಗಿ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಶಾಸಕ ಹಾಗು ಗೃಹ ಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಕಿಡಿಕಾರಿದರು.
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿ ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಹೇಸಿಗೆ ವಿಚಾರ, ಇದು ರಾಜ್ಯಕ್ಕೆ, ನಮ್ಮ ಘನತೆಗೆ ಕುತ್ತು ತರುವಂತಹ ವಿಚಾರ, ಇದರ ಮೂಲ ಎಲ್ಲಿದೆ? ಹಂಚಿದವರು ಯಾರು ಅವರನ್ನು ಬಂಧಿಸಬೇಕು ಎಂದರು.
ಇದನ್ನೂ ಓದಿ:ಹಾಸನ ವೀಡಿಯೋಗಳು ಅಸಲಿಯೋ ನಕಲಿಯೋ ಎಂಬ ಅನುಮಾನವಿದೆ: ಕುಮಾರಸ್ವಾಮಿ
ಇದನ್ನು ರಾಜಕೀಯ ದೊಂಬರಾಟ ಮಾಡಿಕೊಂಡು ನಿತ್ಯ ಟಿವಿಗಳ ಮುಂದೆ ಬಂದು ಕಥೆಕಟ್ಟಿ ಹೇಳುವುದಿಲ್ಲ, ಇದನ್ನೆಲ್ಲಾ ಯಾಕಾಗಿ ಮಾಡುತ್ತಿದ್ದಾರೆ. ಗೊತ್ತಿದೆ. ರಾಸಲೀಲೆಗಳು ನಡೆದೆ ಇಲ್ಲ ಎಂದು ಹೇಳಲಿ ಎಂದು ಕುಮಾರಸ್ವಾಮಿಗೆ ಸವಾಲು ಹಾಕಿದರು.
ಈಗಾಗಲೇ ದೇವರಾಜೇಗೌಡನೇ ರೇವಣ್ಣ ಕುಟುಂಬದ ಇತಿಹಾಸ ನನ್ನ ಬಳಿ ಇದೆ ಎಂದು ರೇವಣ್ಣನಿಗೆ ಸವಾಲು ಹಾಕಿ ನಿಮ್ಮ ಜಾತಕ ಬಿಚ್ಚಿಡುತ್ತೇನೆ ಎಂದು ಹೇಳಿದ್ದಾನೆ. ಇವರು ಎರಡು ಮೂರು ಜನರನ್ನು ಹಿಡಿದು ಹಾಸನದ ಮರ್ಯಾದೆ ಕಾಪಾಡುವ ನಿಟ್ಟಿನಲ್ಲಿ, ಈ ರಾಜ್ಯದ ಮತ್ತು ದೇಶದ ಗೌರವವನ್ನು ಉಳಿಸಿಕೊಡುವ ನಿಟ್ಟಿನಲ್ಲಿ ಸಂತ್ರಸ್ತರಿಗೆ ನ್ಯಾಯ ಒದಗಿಸುಕೊಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಿಂದ ಪ್ರಧಾನಮಂತ್ರಿಗಳ ವರೆಗೆ ನಡೆದುಕೊಳ್ಳಬೇಕು ಎಂದರು.