ಬೆಂಗಳೂರು: ಕಿಡ್ನಾಪ್ ಪ್ರಕರಣದಲ್ಲಿ ಬೇಲ್ ಮೇಲೆ ಹೊರಬಂದಿರುವ ಮಾಜಿ ಸಚಿವ, ಹೊಳೆನರಸೀಪುರ ಶಾಸಕ ಹೆಚ್.ಡಿ.ರೇವಣ್ಣ ನೆಮ್ಮದಿಗಾಗಿ ದೇವರ ಮೊರೆ ಹೋಗಿದ್ದು ನಗರದ ಹಲವು ದೇವಾಲಯಗಳಿಗೆ ಭೆಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ಬೆಂಗಳೂರಿನ ಜಯನಗರದ ವಿನಾಯಕ ದೇಗುಲ, ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಇಂದು ಪೂಜೆ ಸಲ್ಲಿಸಲಿದ್ದಾರೆ. ಜೈಲಿನಿಂದ ಹೊರಬಂದ ಬಳಿಕ ರೇವಣ್ಣ ಪ್ರತಿನಿತ್ಯ ದೇವಸ್ಥಾನಗಳಿಗೆ ಭೇಟಿ ಕೊಡುತ್ತಿದ್ದಾರೆ. ಪರಮ ದೈವ ಭಕ್ತರಾಗಿರುವ ಹೆಚ್.ಡಿ.ರೇವಣ್ಣ ತಮಗೆ ದೇವರ ಮೇಲೆ ಮತ್ತು ಕಾನೂನಿನ ಮೇಲೆ ವಿಶ್ವಾಸವಿದೆ. ಹಾಗಾಗಿ ತಮಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಇದೆ ಎಂದು ಈ ಮೊದಲೂ ಸಹ ಸ್ಪಷ್ಟ ಪಡಿಸಿದ್ದರು.
ಇದನ್ನೂ ಓದಿ: ಕಿಡ್ನಾಪ್ ಪ್ರಕರಣ: ಭವಾನಿ ರೇವಣ್ಣ ವಿರುದ್ಧ SIT ಎಚ್ಚರಿಕೆ ಸಂದೇಶ
ಪ್ರಜ್ವಲ್ ರೇವಣ್ಣ ಕಾಮಕಾಂಡದ ಸಂತ್ರಸ್ತೆಯ ಅಪಹರಣ ಮತ್ತು ಅತ್ಯಾಚಾರದ ಆರೋಪದ ಹಿನ್ನೆಲೆಯಲ್ಲಿ ಹೆಚ್.ಡಿ.ರೇವಣ್ಣ ಅವರನ್ನು SIT ಪೊಲೀಸರು ಬಂಧಿಸಿದ್ದರು. ಒಂದು ವಾರದ ಬಳಿಕ ಜಾಮೀನು ಪಡೆದು ರೇವಣ್ಣ ಜೈಲಿನಿಂದ ಹೊರಗೆ ಬಂದಿದ್ದಾರೆ. ಗ್ರಹದೋಷಗಳಿಂದ ತಮಗೆ ಸಂಕಷ್ಟ ಉಂಟಾಗಿದ್ದು. ಅದನ್ನು ಪರಿಹರಿಸಿಕೊಳ್ಳಲು ದೇವರ ಮೊರೆ ಹೋಗುವಂತೆ ಜ್ಯೋತಿಷಿಗಳು ಸಲಹೆ ನೀಡಿದ್ದಾರೆ. ಹಾಗಾಗಿ ರೇವಣ್ಣ ಜೈಲಿನಿಂದ ಬಿಡುಗಡೆಯಾದ ದಿನದಿಂದಲೂ ಪ್ರತಿನಿತ್ಯ ಎಲ್ಲ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ ಎನ್ನಲಾಗಿದೆ.