ಬೆಂಗಳೂರು : ಆರ್ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದ ವೇಳೆ ಕಳಪೆ ಆಹಾರ ನೀಡಿದ ಆರೋಪದಡಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಡಳಿತ ಮಂಡಳಿ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಪಂದ್ಯದ ವೇಳೆ ಊಟ ಮಾಡಿದ ವಿದ್ಯಾರಣ್ಯಪುರ ನಿವಾಸಿ ಚೈತನ್ಯ (23) ಎಂಬುವರು ಆಸ್ಪತ್ರೆಗೆ ದಾಖಲಾಗಿದ್ದರು. ಅವರು ನೀಡಿದ ದೂರನ್ನು ಆಧರಿಸಿ ಕೆಎಸ್ಸಿಎ ಆಡಳಿತ ಮಂಡಳಿ ಹಾಗೂ ಕ್ಯಾಂಟಿನ್ ವ್ಯವಸ್ಥಾಪಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ಮೇ 12ರಂದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಆರ್ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯ ನಡೆದಿತ್ತು. ಪಂದ್ಯ ವೀಕ್ಷಣೆಗಾಗಿ ಚೈತನ್ಯ ಅವರು ತಮ್ಮ ಸ್ನೇಹಿತ ಗೌತಮ್ ಅವರೊಂದಿಗೆ ತೆರಳಿದ್ದರು. ಕತಾರ್ ಏರ್ ವೇಸ್ ಫ್ಯಾನ್ಸ್ ಟರೇಸ್ ಸ್ಯಾಂಡಿನಲ್ಲಿ ಪಂದ್ಯ ವೀಕ್ಷಿಸುತ್ತಿದ್ದರು.
ಈ ಸಂದರ್ಭದಲ್ಲಿ ಸ್ಟ್ಯಾಂಡಿನ ಕ್ಯಾಂಟಿನ್ನಿಂದ ಊಟ ಸೇವಿಸಿದ ನಂತರ ಹೊಟ್ಟೆ ತೊಳೆಸಿದಂತಾಗಿದೆ. ಬಳಿಕ ತಾನು ಕುಳಿತುಕೊಂಡಿದ್ದ ಜಾಗದಲ್ಲಿ ಚೈತನ್ಯ ಕುಸಿದುಬಿದ್ದಿದ್ದಾರೆ. ಸ್ಟೇಡಿಯಂ ಸಿಬ್ಬಂದಿ ನೆರವಿನಿಂದ ಸ್ಟೇಡಿಯಂ ಹೊರಗಿದ್ದ ಆ್ಯಂಬುಲೆನ್ಸ್ ನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಮಣಿಪಾಲ್ ಆಸ್ಪತ್ರೆ ದಾಖಲಿಸಲಾಗಿತ್ತು.
ಆಸ್ಪತ್ರೆಯಲ್ಲಿ ದಾಖಲಿಸಿದಾಗ ಚೈತನ್ಯನನ್ನ ಪರೀಕ್ಷಿಸಿದ ವೈದ್ಯರು ಫುಡ್ ಪಾಯಿಸನ್ ಆಗಿದೆ ಎಂದು ದೃಢಪಡಿಸಿದ್ದರು. ಈ ಸಂಬಂಧ ತಮ್ಮ ಆರೋಗ್ಯ ಹದಗೆಡಲು ಕ್ಯಾಂಟಿನ್ನಲ್ಲಿ ನೀಡಿದ ಆಹಾರವೇ ಕಾರಣ. ಹೀಗಾಗಿ, ಕೆಎಸ್ಸಿಎ ಆಡಳಿತ ಮಂಡಳಿಯೇ ವಿರುದ್ಧ ಕ್ರಮಕೈಗೊಳ್ಳುವಂತೆ ದೂರು ನೀಡಿದ್ದಾರೆ.