ಬೆಂಗಳೂರು : ಡಿಸಿಎಂ ಡಿ.ಕೆ. ಶಿವಕುಮಾರ್ ಕಲಾಕಾರ, ಅವರಂಥ ಕಲಾಕಾರ ಕರ್ನಾಟಕದಲ್ಲಿ ಯಾರು ಇಲ್ಲ ಎಂದು ಸಂಸದ ಡಿ.ವಿ. ಸದಾನಂದ ಗೌಡ ಟೀಕಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಎಸ್ಐಟಿ ತನಿಖೆ ಸರಿಯಾದ ಹಾದಿಯಲ್ಲಿ ಸಾಗುತ್ತಿದ್ದಂತೆ ಕಾಣ್ತಾ ಇಲ್ಲ ಎಂದು ಆರೋಪಿಸಿದ್ದಾರೆ.
ಎಸ್ಐಟಿ ತನಿಖೆ ಬಗ್ಗೆ ನಂಬಿಕೆ ಇಲ್ಲ. ಕಾರ್ತಿಕ್ ಹೇಗೆ ಹೊರಗೆ ಹೋದ್ರು? ಅವರನ್ನು ಯಾಕೆ ವಶಕ್ಕೆ ಪಡೆದಿಲ್ಲ? ಕೊನೆಯಲ್ಲಿ ಚುನಾವಣೆಗಾಗಿ ಏನೋ ಪ್ರಯತ್ನ ಮಾಡಿದ್ರು. ಇದರ ಸೂತ್ರದಾರ ಡಿ.ಕೆ. ಶಿವಕುಮಾರ್. ಮಾಜಿ ಪ್ರಧಾನಿ ಹೆಚ್.ಡಿ. ದೇವೆಗೌಡರು ಒಬ್ಬ ಮುತ್ಸದ್ಧಿ. ಕಾನೂನು ತಿರುಚುವ ಕಾರ್ಯವನ್ನ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಮಾಡಿದೆ ಎಂದು ದೂರಿದ್ದಾರೆ.
ರೇವಣ್ಣ ರನ್ನ ಬಲಿಪಶು ಮಾಡಿದ್ದಾರೆ
ಕಾಂಗ್ರೆಸ್ ಹತಾಶೆ ಭಾವನೆಯಲ್ಲಿ ಈ ಕೆಲಸ ಮಾಡಿದೆ. ರೇವಣ್ಣ ವಿಷಯದಲ್ಲಿ ಪ್ಲಾನ್ ಆಫ್ ಆಕ್ಷನ್ ಮಾಡಿದ್ದಾರೆ. ಪ್ರಜ್ವಲ್ ರೇವಣ್ಣ ಇಲ್ಲ ಎಂದು ಇವರನ್ನ ಬಲಿಪಶು ಮಾಡುವ ಪ್ರಯತ್ನ ಮಾಡಿದ್ದಾರೆ. ಕಳೆದ ಬಾರಿ ಬಂದಷ್ಟು ಸೀಟ್ ಈ ಬಾರಿ ಕಾಂಗ್ರೆಸ್ ಬರಲ್ಲ. ಮೋದಿ ಗ್ಯಾರಂಟಿಗೆ ಕಾಂಗ್ರೆಸ್ ಹತಾಶವಾಗಿದೆ ಎಂದು ಹೇಳಿದ್ದಾರೆ.
ಸಿಎಂ, ಡಿಕೆಶಿ ಹಾವು ಮುಂಗುಸಿ ಆಗಿದ್ರು
ವಿಧಾನಸಭೆ ಚುನಾವಣೆ ಬಳಿಕ ಕಾಂಗ್ರೆಸ್ನವರು ಲೋಕಸಭಾ ಚುನಾವಣೆ ಗೆಲ್ಲಲು ದೊಡ್ಡ ಮಟ್ಟದಲ್ಲಿ ಪ್ರಯತ್ನ ಮಾಡಿದ್ರು. ಆದರೆ, ಪ್ರಧಾನಿ ಮೋದಿ ಗ್ಯಾರಂಟಿ ಮುಂದೆ ಇವರದ್ದು ಎಲ್ಲಾ ಟುಸ್ ಆಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಹಾವು ಮುಂಗುಸಿ ಆಗಿದ್ರು. ಆದರೆ, ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಹಿನ್ನಡೆ ಆಗುತ್ತದೆ ಅಂತ ಗೊತ್ತಾಯ್ತು ಎಂದು ಡಿ.ವಿ. ಸದಾನಂದ ಗೌಡ ಕುಟುಕಿದ್ದಾರೆ.