ದಾವಣಗೆರೆ : ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಾರೆ, ಬೆಟ್ಟಿಂಗ್ ಕಟ್ತಿರಾ? ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಸವಾಲ್ ಹಾಕಿದ್ದಾರೆ.
ಮತದಾನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಚುನಾವಣೆಯಲ್ಲಿ ಎರಡು ಲಕ್ಷ ಮತಗಳ ಅಂತರದಿಂದ ಗೆಲ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಯಾವುದೇ ಕಾರಣಕ್ಕೂ ಬಿಜೆಪಿ ಅಭ್ಯರ್ಥಿ ಗೆಲ್ಲುವುದಿಲ್ಲ. ನಾವೇ ಈ ಚುನಾವಣೆಯಲ್ಲಿ ಗೆಲ್ಲೋದು. ಬೇಕಿದ್ದರೆ ನಾನು ಒಂದು ರೂಪಾಯಿಗೆ ನೂರು ರೂಪಾಯಿ ಕೊಡ್ತೀನಿ. ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಗೆಲುವು ನಿಶ್ಚಿತ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ಚುನಾವಣೆಯಲ್ಲಿ ಕಾಂಗ್ರೆಸ್ ಹಣದ ಹೊಳೆ ಹರಿಸಿದೆ ಎಂಬ ಸಂಸದ ಜಿ.ಎಂ. ಸಿದ್ದೇಶ್ವರ್ ಆರೋಪಕ್ಕೆ ತಿರುಗೇಟು ನೀಡಿದ ಅವರು, ಅವನೇನು ಕತ್ತೆ ಕಾಯ್ತಾ ಇದ್ನಾ..? ಅವನಿಗೆ ಹೋಗಿ ಹೇಳಿ, ನಿಮ್ಮ ಮಾವ ನಿಮಗೆ ಕತ್ತೆ ಕಾಯೋಕು ಹೋಗು ಅಂದ ಅಂತ ಎಂದು ಏಕವಚನದಲ್ಲೇ ಸಂಸದ ಸಿದ್ದೇಶ್ವರ್ ವಿರುದ್ಧ ಶಾಮನೂರು ಶಿವಶಂಕರಪ್ಪ ವಾಗ್ದಾಳಿ ನಡೆಸಿದ್ದಾರೆ.
3 ಬಾರಿ ಮೋಸದಿಂದ ಬಂದು ಗೆದ್ದಿದ್ದಾರೆ
ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ವಿಶ್ವಾಸ ಇದೆ, ಗೆದ್ದೆ ಗೆಲ್ಲುತ್ತೇವೆ. ಬಿಜೆಪಿ 3 ಬಾರಿ ಮೋಸದಿಂದ ಬಂದು ಗೆದ್ದಿದ್ದಾರೆ. ಮಠ, ಆಸ್ತಿ ಕಬಳಿಕೆ ಮಾಡಿ ಲೂಟಿ ಹೊಡೆದರು. ಜಿ.ಎಂ. ಸಿದ್ದೇಶ್ವರ್ ಅಭಿವೃದ್ದಿ ದೊಡ್ಡ ಝೀರೋ. ವೈಯಕ್ತಿಕ ಸಾಧನೆ ಶೂನ್ಯ, ಮೋದಿ ಮೋದಿ ಅಂತಾರೆ. ಗ್ಯಾರಂಟಿ ಅಲೆ ಚೆನ್ನಾಗಿದೆ, ಗೆಲ್ಲುತ್ತೇವೆ ಎಂದು ತಿಳಿಸಿದ್ದಾರೆ.