ಬೆಂಗಳೂರು : ಭೂಮಿಯಲ್ಲಿ ಇದ್ದಾಗ ಸಂಸದ ಪ್ರಜ್ವಲ್ ರೇವಣ್ಣರನ್ನು ಬಿಟ್ಟಿದ್ದಾರೆ. ಇನ್ನೂ ಪಾತಾಳದಿಂದ ಹೇಗೆ ಹಿಡಿದು ತರ್ತಾರೆ? ಎಂದು ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಈಗಾಗಲೇ ಪ್ರಜ್ವಲ್ ರೇವಣ್ಣರನ್ನ ಅಮಾನತು ಮಾಡಿದೆ ಎಂದು ಹೇಳಿದ್ದಾರೆ.
ಯಾವುದೇ ಸರ್ಕಾರ ಇದ್ದರೂ ಡಿಪ್ಲಾಮ್ಯಾಟಿಕ್ ಪಾಸ್ ಪೋರ್ಟ್ ಬರುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಪಾಸ್ ಪೋರ್ಟ್ ನೀಡಿಲ್ಲ. ರಾಜ್ಯದ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು? ಪೋಲೀಸರು ಪತ್ರ ಬರೆಯಬೇಕಿತ್ತು, ಕೇಂದ್ರ ಸರ್ಕಾರಕ್ಕೆ ಪತ್ರ ಕೂಡ ಬರೆದಿಲ್ಲ. ತಪ್ಪು ಯಾರದು? ಎಂದು ವಾಗ್ದಾಳಿ ನಡೆಸಿದ್ದಾರೆ.
ಜೆಡಿಎಸ್ ಜೊತೆ ಮೈತ್ರಿ ಮುಂದುವರಿಸುವ ಬಗ್ಗೆ ಕೇಂದ್ರ ನಾಯಕರ ಜೊತೆಗೆ ಚರ್ಚೆ ನಡೆಯುತ್ತಿದೆ. 2 ಅಥವಾ 3 ದಿನಗಳಲ್ಲಿ ಈ ಬಗ್ಗೆ ಗೊತ್ತಾಗುತ್ತದೆ. ಮೈತ್ರಿ ದೆಹಲಿ ಮಟ್ಟದಲ್ಲಿ ಆಗಿರೋದು. ಕೇಂದ್ರೀಯ ಸಂಸದೀಯ ಮಂಡಳಿ ಈ ಬಗ್ಗೆ ತೀರ್ಮಾನ ಮಾಡುತ್ತದೆ ಎಂದು ಹೇಳಿದ್ದಾರೆ.
ರೇವಣ್ಣ ಬಂಧನ ಸರಿಯಾಗಿದೆ
ಮಾಜಿ ಸಚಿವ ಹೆಚ್.ಡಿ. ರೇವಣ್ಣ ಬಂಧನ ಸರಿಯಾಗಿದೆ. ಎಸ್ಐಟಿ ಅಧಿಕಾರಿಗಳ (ಪೋಲೀಸರ) ಕ್ರಮ ಸರಿಯಾಗಿದೆ. ರೇವಣ್ಣ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆರ್. ಅಶೋಕ್ ತಿಳಿಸಿದ್ದಾರೆ.