ಹುಬ್ಬಳ್ಳಿ : ರಾಜ್ಯದಲ್ಲಿ ನಮಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಬಿಜೆಪಿ ಪಕ್ಷ ಈ ಚುನಾವಣೆಯಲ್ಲಿ ಡಬಲ್ ಡಿಜಿಟ್ ಮುಟ್ಟುವುದಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇದು ಸತ್ಯ ಮತ್ತು ಸುಳ್ಳಿನ ಹೋರಾಟದ ಮಧ್ಯೆ ನಡೆಯುವ ಚುನಾವಣೆ. ದ್ವೇಷ ಮತ್ತು ಪ್ರೀತಿ ನಡುವೆ ಚುನಾವಣೆ ನಡೆದಿದೆ ಎಂದು ತಿಳಿಸಿದರು.
ದೇಶಕ್ಕೆ ಏನು ಕೊಟ್ಟಿದ್ದೇನೆ ಎಂಬುದರ ಬಗ್ಗೆ ಈ ಚುನಾವಣೆಯಲ್ಲಿ ಚರ್ಚೆ ಆಗಲಿಲ್ಲ. ದೇಶವನ್ನ ವಿಭಜಿಸುವ ಬಗ್ಗೆ ಕ್ಯಾಂಪೇನ್ ಮಾಡಿದ್ರು. ಬಿಜೆಪಿ ಯಾವತ್ತೂ ಮೀಸಲಾತಿ ಪರ ಇಲ್ಲ. ಆರ್ಎಸ್ಎಸ್ ಮುಖಂಡ ಮೋಹನ್ ಭಾಗವತ್ ಸಂವಿಧಾನ ಮತ್ತು ಮೀಸಲಾತಿ ವಿರುದ್ಧ ಮಾತನಾಡಿದ್ದಾರೆ. ಮೀಸಲಾತಿ ಮೇಲೆ ಅವರಿಗೆ ನಂಬಿಕೆ ಇಲ್ಲ ಎಂದು ಕುಟುಕಿದರು.
ಮಾಡೋದು ಒಂದು, ಹೇಳುವುದು ಇನ್ನೊಂದು
ಅನಿವಾರ್ಯವಾಗಿ ನಮಗೆ ತೊಂದರೆ ಆಗುತ್ತೆ ಅಂತ ಸುಮ್ಮನೆ ಇದ್ದಾರೆ. ನಿಜವಾಗಿಯೂ ಸಂವಿಧಾನದ ಬಗ್ಗೆ ಅವರಿಗೆ ತಿಳಿದಿದ್ದರೆ, ಇವತ್ತು ಜಾಹೀರಾತು ನೀಡುವ ಅವಶ್ಯಕತೆ ಇರಲಿಲ್ಲ. ಅವರ ಪರಿಕಲ್ಪನೆಯೇ ಬೇರೆ ಇದೆ. ಆರ್ಎಸ್ಎಸ್ ಕಚೇರಿಯ ಮೇಲೆ ಬಾವುಟವನ್ನ ಹಾರಿಸದಂತವರು ಬಿಜೆಪಿಯವರು. ಅವರು ಮಾಡೋದು ಒಂದು, ಹೇಳುವುದು ಇನ್ನೊಂದು ಎಂದು ಟೀಕಿಸಿದರು.
ಸುಳ್ಳು ಹೇಳುವ ಬಿಜೆಪಿಯನ್ನ ಮನೆಗೆ ಕಳುಹಿಸಿ
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ. ಉತ್ತರ ಕರ್ನಾಟಕ ಭಾಗದ ಅನೇಕ ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ. ಅಹಂಕಾರದಲ್ಲಿ ಪ್ರಲ್ಹಾದ್ ಜೋಶಿ ಇದ್ದರು, ಕರ್ನಾಟಕಕ್ಕೆ ಏನು ಮಾಡಿದ್ರಿ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇರುವ ಕಾಂಗ್ರೆಸ್ ಪಕ್ಷಕ್ಕೆ ನೀವು ಮತ ಹಾಕಬೇಕು. ಸುಳ್ಳುಗಳನ್ನ ನಿತ್ಯ ಹೇಳುವ ಬಿಜೆಪಿಯನ್ನ ಮನೆಗೆ ಕಳುಹಿಸಬೇಕು ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.