ಬೆಂಗಳೂರು : ಆ ಕುಟುಂಬದ ಆಸ್ತಿ ಪೆನ್ಡ್ರೈವ್. ತೆನೆ ಹೊತ್ತ ಮಹಿಳೆ ಪೆನ್ಡ್ರೈವ್ ಹೊರಬೇಕಾಗುತ್ತದೆ ಎಂದು ಜೆಡಿಎಸ್ ಹಾಗೂ ಹೆಚ್ಡಿಡಿ ಕುಟುಂಬದ ವಿರುದ್ಧ ಸಂಸದ ಡಿ.ಕೆ. ಸುರೇಶ್ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇದು ಪೆನ್ಡ್ರೈವ್ ಕುಟುಂಬ. ಇದನ್ನ ದೇಶ ರಾಜ್ಯದ ಜನರು ಕೊಂಡಾಡುತ್ತಿದ್ದಾರೆ. ಅವರ ಮನಸ್ಸಿಗೆ ಬೇಕಾದ್ರೆ ಇನ್ನೂ ನಮ್ಮನ್ನ ಬೈದುಕೊಳ್ಳಲಿ ಎಂದು ಕುಟುಕಿದ್ದಾರೆ.
ಹಾಸನದ ಹೆಣ್ಣು ಮಕ್ಕಳ ಮರ್ಯಾದೆ ಉಳಿಸಬೇಕು ಅಷ್ಟೇ ಸಾಕು ನಮಗೆ. ನಾವು ಅವರನ್ನ ಕೆಣಕಿಲ್ಲ. ಪ್ರಜ್ವಲ್ ರೇವಣ್ಣರ ಪೆನ್ಡ್ರೈವ್ ಅವರ ಮೈತ್ರಿ ಪಾರ್ಟರ್ ಬಿಡುಗಡೆ ಮಾಡಿರುವುದು. ಅವರ ಮೇಲೆ ಮಾತನಾಡಲು ಧೈರ್ಯ ಇಲ್ಲದೇ ನಮ್ಮ ಮೇಲೆ ಮಾತನಾಡುತ್ತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
HDKಗೆ ದೇವರು ಒಳ್ಳೆಯದು ಮಾಡಲಿ
ಕುಮಾರಸ್ವಾಮಿಯವರಿಗೆ ದೇವರು ಒಳ್ಳೆಯದು ಮಾಡಲಿ. ನಾವೇನು ಅವರನ್ನು ಕೆಣಕಿಲ್ವಲ್ಲ, ಕೆಣಕಿರೋರು ಯಾರು? ಅವರ ಅಲೆಯನ್ಸ್ ಪಾರ್ಟಿ ಅವರನ್ನು ಕೆಣಕಿರೋದು. ಅವರ ಅಲಯನ್ಸ್ ಪಾರ್ಟಿ ಇಂದ ವಿಡಿಯೋ ಬಿಡುಗಡೆಯಾಗಿರೋದು. ಅವರ ಅಲೆಯನ್ಸ್ ಪಾರ್ಟಿ ಅವರೇ ವಿಡಿಯೋ ಬಿಡುಗಡೆ ಮಾಡಿರೋದು ಎಂದು ಹೇಳಿದ್ದಾರೆ.
ವಿಷಯ ಡೈವರ್ಟ್ ಮಾಡುವ ಪ್ರಯತ್ನ
ಡ್ರೈವರ್ ಕಾರ್ತಿಕ್ ಮಲೇಷ್ಯಾಗೆ ಕಳಿಸಿದ್ದು ಯಾರು? ಎಂಬ ಕುಮಾರಸ್ವಾಮಿ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದು ನಮಗೆ ಗೊತ್ತಿಲ್ಲ. ಕುಮಾರಸ್ವಾಮಿ ಇಂಟರ್ ನ್ಯಾಷನಲ್ ಏಜೆನ್ಸಿ ಇಟ್ಕೊಂಡಿದ್ದಾರೆ. ಎಲ್ಲ ಮಾಹಿತಿ ಗೊತ್ತಿರುತ್ತೆ. ನನಗೆ ಅದರ ಬಗ್ಗೆ ಮಾಹಿತಿ ಇಲ್ಲ. ಅವರು ವಿಷಯ ಡೈವರ್ಟ್ ಮಾಡಲು ಏನೇನೋ ಹೇಳುತ್ತಾರೆ. ಹಾಸನ ಜಿಲ್ಲೆಯ ಮಹಿಳೆಯರಿಗೆ ಆಗಿರುವ ಅನ್ಯಾಯವನ್ನು, ತಪ್ಪನ್ನು ಸರಿಪಡಿಸುವುದಕ್ಕೆ ಏನು ಮಾಡಬೇಕು. ಅದನ್ನ ಬಿಟ್ಟು ವಿಷಯ ಡೈವರ್ಟ್ ಮಾಡುವ ಪ್ರಯತ್ನ ಸರಿಯಲ್ಲ ಎಂದು ಡಿ.ಕೆ. ಸುರೇಶ್ ಹೇಳಿದ್ದಾರೆ.