ಬೆಳಗಾವಿ: ಹಾಸನದ ಹಾಲಿ ಎಂಪಿ ಪ್ರಜ್ವಲ್ ರೇವಣ್ಣ ಜೂನ್ 4. 2024ರ ವರೆಗೆ ಕಾಂಗ್ರೆಸ್ – ಜೆಡಿಎಸ್ ಒಕ್ಕೂಟದ ಸಂಸದರಾಗಿರುತ್ತಾರೆ. ಈ ಬಾರಿಯ ಚುನಾವಣೆಯ ಫಲಿತಾಂಶ ಬಂದು ಅದರಲ್ಲೂ ಗೆದ್ದರೇ ಆ ಬಳಿಕ ಎನ್ಡಿಎ ಸಂಸದರಾಗುತ್ತಾರೆ ಎಂದು ಬಿಜೆಪಿ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್ ತಿಳಿಸಿದರು.
ಬೆಳಗಾವಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಮಹಿಳೆಯರ ಮಾನಹಾನಿ ಕೃತ್ಯ ಯಾರೇ ಮಾಡಿದ್ದರೂ ಅದು ಘೋರ ಅಪರಾಧ, ಅಂತವರು ಯಾರೇ ಆದರೂ ಅವರಿಗೆ ಶಿಕ್ಷೆಯಾಗಲೇ ಬೇಕು, ಇನ್ನು, ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಪ್ರಜ್ವಲ್ ನನ್ನು ಜೆಡಿಎಸ್ ಪಕ್ಷದಿಂದ ಅಮಾನತು ಮಾಡಿದೆ. ಇನ್ನು ಈ ಪೆನ್ಡ್ರೈವ್ ಪ್ರಕರಣದ ತನಿಖೆಯನ್ನು ಈಗಾಗಲೇ ಎಸ್ಐಟಿ ತಂಡ ಕೈಗೊಂಡಿದ್ದು ಸದ್ಯ ಹರಿದಾಡುತ್ತಿರುವ ವಿಡಿಯೋಗಳಲ್ಲಿ ಸತ್ಯಾಸತ್ಯತೆ ಎಷ್ಟಿದೆ ಎನ್ನುವುದು ಬಹಿರಂಗವಾಗಬೇಕಾಗಿದೆ. ಕಾನೂನು ಎಲ್ಲರಿಗೂ ಒಂದೇ ಇದೆ, ಅವರು ತಪ್ಪು ಮಾಡಿದ್ರೆ ಶಿಕ್ಷೆ ಅನಿಭವಿಸುತ್ತಾರೆ ಎಂದರು.
ಇದನ್ನೂ ಓದಿ: ರೇವಣ್ಣ, ಪ್ರಜ್ವಲ್ಗೆ SIT ನೋಟೀಸ್: ಪ್ರಕರಣಕ್ಕೆ ರಾಜ್ಯ ಮಕ್ಕಳ ರಕ್ಷಣಾ ಆಯೋಗ ಎಂಟ್ರಿ
ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೋಗಳಿಗೆ ಸಂಬಂಧಿಸಿದ ಪೆನ್ಡ್ರೈವ್ ಯಾರು ರಿಲೀಸ್ ಮಾಡಿದ್ದಾರೋ ಅದು ಘೋರ ಅಪರಾಧ, ಮಹಿಳೆಯರ ಖಾಸಗಿತನವನ್ನು ಯಾರೇ ಬಹಿರಂಗ ಪಡಿಸಿದರು ಅದು ತಪ್ಪು, ಕೊನೆಯ ಪಕ್ಷ ಮಹಿಳೆಯರ ಮುಖವನ್ನು ಬ್ಲರ್ ಮಾಡಬೇಕಿತ್ತು ಎಂದು ಕಿಡಿಕಾರಿದರು.