ಬೆಂಗಳೂರು : ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಿ ಹೋಗಲು ಏಕೆ ಬಿಟ್ಟಿರಿ? ವಿದೇಶಕ್ಕೆ ಕಳಿಸುವುದರಲ್ಲಿ ಕಮಲ’ದಳ’ದ ಒಳ ಒಪ್ಪಂದವಿಲ್ಲದೇ ಸಾಧ್ಯವೇ? ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನೆ ಮಾಡಿದ್ದಾರೆ.
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಕುಮಾರಸ್ವಾಮಿ, ರೇವಣ್ಣ ಅವರು ಪ್ರಜ್ವಲ್ನ ವಾಪಸ್ ಕರೆಸಲಿ. SIT ಮುಂದೆ ತನಿಖೆಗೆ ಒಳಪಡಿಸಲಿ ಒತ್ತಾಯಿಸಿದ್ದಾರೆ.
ಮೊದಲೇ ಗೃಹ ಸಚಿವ ಅಮಿತ್ ಶಾ ಅವರಿಗೆ ವಿಷಯ ತಿಳಿಸಿದ್ದರು ಎಂದು ಬಿಜೆಪಿ ನಾಯಕರೇ ಹೇಳಿದ್ದಾರೆ. ಎಲ್ಲ ಏರ್ಪೋರ್ಟ್ಗಳು ಕೇಂದ್ರ ಸರ್ಕಾರದ ಕೈಯಲ್ಲಿವೆ. ಫೇಕ್ ವಿಡಿಯೋ ಅಂತ ಬಿಜೆಪಿ ನಾಯಕರಾದ ಬೊಮ್ಮಾಯಿ, ಪ್ರಲ್ಹಾದ್ ಜೋಶಿ ಅವರು ಹೇಗೆ ಹೇಳ್ತಾರೆ? ಈಗ ತನಿಖೆ ಆರಂಭವಾಗಿದೆ. ಫೇಕ್ ಇದ್ದಿದ್ರೆ ಪ್ರಜ್ವಲ್ ರೇವಣ್ಣ ಅವರು ವಿದೇಶಕ್ಕೆ ಓಡಿ ಹೋಗಿದ್ದು ಏಕೆ? ಎಲ್ಲವನ್ನು ಮುಚ್ಚಿಹಾಕಲು ಕಮಲ’ದಳ’ ತಯಾರಾಗಿ ನಿಂತಂತಿದೆ ಎಂದು ಆರೋಪಿಸಿದ್ದಾರೆ.
ಮಾಹಿತಿ ಗೊತ್ತಿಲ್ಲದಿದ್ದರೆ ಮಾತನಾಡಿ
ಪ್ರಜ್ವಲ್ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಕ್ರಮ ಯಾಕೆ ತೆಗೆದುಕೊಂಡಿಲ್ಲ ಎಂದು ಅಮಿತ್ ಶಾ ನಮ್ಮ ಸರ್ಕಾರವನ್ನು ಕೇಳಿದ್ದಾರೆ. ಅಮಿತ್ ಶಾರವರೇ, ಮಾಹಿತಿ ಗೊತ್ತಿಲ್ಲದಿದ್ದರೆ ಮಾತಾಡಲು ಹೋಗಬೇಡಿ. ಅದು ಅಪಸವ್ಯವಾಗುತ್ತದೆ. ಪ್ರಜ್ವಲ್ ರೇವಣ್ಣರ ಕರ್ಮಕಾಂಡ ತಿಳಿದ ತಕ್ಷಣವೇ ನಮ್ಮ ಸರ್ಕಾರ ತನಿಖೆಗೆ SIT ರಚಿಸಿದೆ ಎಂದು ಹೇಳಿದ್ದಾರೆ.
ಕಿರಾತಕ ಕೃತ್ಯ ನಿಮಗೆ ಮೊದಲೇ ತಿಳಿದಿತ್ತು
SIT ಈಗಾಗಲೇ ತನಿಖೆಯನ್ನೂ ಆರಂಭಿಸಿದೆ. SIT ತನಿಖೆಯಲ್ಲಿ ಯಾರು ತಪ್ಪಿತಸ್ಥರು ಎಂದು ತಿಳಿಯಯವುದೋ ಅವರ ವಿರುದ್ಧ ಖಂಡಿತವಾಗಿಯೂ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ. ಅದರ ಬಗ್ಗೆ ನಿಮಗೆ ಚಿಂತೆ ಬೇಡ. ಆದರೆ, ಪ್ರಜ್ವಲ್ ರೇವಣ್ಣರ ಕಿರಾತಕ ಕೃತ್ಯ ನಿಮಗೆ ಮೊದಲೇ ತಿಳಿದಿತ್ತು. ಹೀಗಿದ್ದರೂ ಆತನನ್ನು NDA ಅಭ್ಯರ್ಥಿ ಮಾಡಿ ಚುನಾವಣೆಗೆ ನಿಲ್ಲಿಸಿದ್ದೀರಲ್ಲಾ. ನೀವು ಎಂತವರಿರಬಹುದು?ಎಂದು ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.