ಬೆಂಗಳೂರು : ಪಿಯುಸಿ ಫಲಿತಾಂಶ ವಿಚಾರವಾಗಿ ತಾಯಿ ಹಾಗೂ ಮಗಳ ನಡುವೆ ಉಂಟಾದ ಜಗಳ ಪುತ್ರಿಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯ ಶಾಸ್ತ್ರಿನಗರದ 3ನೇ ಕ್ರಾಸ್ನಲ್ಲಿ ಈ ಘಟನೆ ನಡೆದಿದೆ. ತಾಯಿ ಹಾಗೂ ಮಗಳ ಪರಸ್ಪರ ಚಾಕು ಇರಿತದಲ್ಲಿ ಪುತ್ರಿ ಮೃತಪಟ್ಟಿದ್ದಾಳೆ.
ಸಾಹಿತಿ (18) ಮೃತ ಮಗಳು. ಪದ್ಮಜಾ ಮಗಳನ್ನೇ ಕೊಂದ ತಾಯಿ. ಇತ್ತೀಚೆಗೆ ಹೊರಬಿದ್ದ ದ್ವಿತೀಯ ಪಿಯುಸಿಯಲ್ಲಿ ಮಗಳು ಸಾಹಿತಿ ಪಾಸ್ ಆಗಿದ್ದಳು. ಆದರೆ, ಕಡಿಮೆ ಅಂಕ ಬಂದಿದೆ ಎಂದು ಪುತ್ರಿಯೊಂದಿಗೆ ತಾಯಿ ಪದ್ಮಜಾ ಜಗಳ ಮಾಡಿದ್ದಾರೆ.
ಈ ಜಗಳ ತಾರಕಕ್ಕೇರಿ ತಾಯಿ ಹಾಗೂ ಮಗಳು ಪರಸ್ಪರ ಚಾಕುವಿನಿಂದ ಇರಿದುಕೊಂಡಿದ್ದಾರೆ. ಈ ವೇಳೆ ತೀವ್ರ ರಕ್ತಸ್ರಾವವಾಗಿ ಸಾಹಿತಿ ಮೃತಪಟ್ಟಿದ್ದು, ತಾಯಿ ಪ್ರಾಣಪಾಯದಿಂದ ಪಾರಾಗಿದ್ದಾರೆ. ತಾಯಿ ಪದ್ಮಜಾಗೆ ನಾಲ್ಕೈದು ಕಡೆ ಸಾಹಿತಿ ಚಾಕು ಇರಿದಿದ್ದಾಳೆ.
ಸದ್ಯ ಪದ್ಮಜಾ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.