ಉತ್ತರ ಕನ್ನಡ : ವೃಕ್ಷಮಾತೆ ಎಂದೇ ಪ್ರಸಿದ್ಧರಾಗಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತುಳಸಿ ಗೌಡ ಅವರ ಆರೋಗ್ಯದಲ್ಲಿ ಏರುಪೇರಾಗಿದೆ.
ಮನೆಯಲ್ಲಿ ಕಾಲು ಜಾರಿ ಬಿದ್ದು ಪದ್ಮಶ್ರೀ ತುಳಸಿ ಗೌಡ ಅವರು ಅಸ್ವಸ್ಥರಾಗಿದ್ದು, ಅವರನ್ನು ಕಾರವಾರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಾಲು ಜಾರಿ ಬಿದ್ದ ಪರಿಣಾಮ ತುಳಸಜ್ಜಿ ಅಸ್ವಸ್ಥಗೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ಮನೆಯಲ್ಲಿ ವೃಕ್ಷಮಾತೆ ತುಳಸಿ ಗೌಡ ಅವರು ಜಾರಿ ಬಿದ್ದಿದ್ದರಿಂದ ಕಾಲಿಗೆ ಪೆಟ್ಟಾಗಿತ್ತು. ಲಕ್ಷಾಂತರ ಮರಗಳನ್ನು ಬೆಳೆಸಿ ವೃಕ್ಷಮಾತೆ ಎನಿಸಿಕೊಂಡಿರುವ ತುಳಸಿ ಗೌಡ ಅವರಿಗೆ ಸದ್ಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಶಾಸಕ ಸತೀಶ್ ಸೈಲ್ ಮತ್ತು ಡಾ. ಅಂಜಲಿ ನಿಂಬಾಳ್ಕರ್ ಅವರು ಕೂಡ ವಿಷಯ ತಿಳಿದು ತುಳಸಿ ಗೌಡರ ಆರೋಗ್ಯ ವಿಚಾರಿಸಿದ್ದಾರೆ. ವೈದ್ಯರಿಂದ ಮಾಹಿತಿ ಪಡೆದು ಉತ್ತಮ ವೈದ್ಯಕೀಯ ಔಷಧೋಪಚಾರ ಮಾಡುವಂತೆ ಸೂಚಿಸಿದ್ದಾರೆ.
ಧಾರವಾಡ ಕೃಷಿ ವಿವಿಯಿಂದ ಡಾಕ್ಟರೇಟ್
ವೃಕ್ಷಮಾತೆ ತುಳಸಿ ಗೌಡ ಅವರು ಅಂಕೋಲಾ ತಾಲೂಕಿನ ಉಳುವರೆ ಮೂಲದ ಹೊನ್ನಳ್ಳಿಯವರು. ತುಳಸಿ ಗೌಡ ಅವರು ಕೃಷಿ ಕ್ಷೇತ್ರಕ್ಕೆ ನೀಡಿರುವ ಸೇವೆಯನ್ನು ಪರಿಗಣಿಸಿ ಧಾರವಾಡ ಕೃಷಿ ವಿವಿ ಡಾಕ್ಟರೇಟ್ ಪದವಿ ನೀಡಿದೆ.