Saturday, May 4, 2024

ಹನುಮ ಜಯಂತಿಯಂದೇ ಘೋರ ದುರಂತ : ಮೂವರು ಹನುಮ ಮಾಲಾಧಾರಿಗಳು ಸಾವು

ರಾಯಚೂರು : ಎಲ್ಲೆಡೆ ಹನುಮ ಜಯಂತಿಯ ಸಂಭ್ರಮ ಮನೆಮಾಡಿದೆ. ಇತ್ತ, ರಾಯಚೂರಿನಲ್ಲಿ ಹನುಮ ಜಯಂತಿಯಂದೇ ಬೆಳ್ಳಂ ಬೆಳಗ್ಗೆ ಘೋರ ದುರಂತ ಸಂಭವಿಸಿದೆ.

ಬೊಲೆರೋ ವಾಹನ ಡಿಕ್ಕಿ ಹೊಡೆದು ಮೂವರು ಹನುಮ ಮಾಲಾಧಾರಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಯಚೂರಿನ ಶಕ್ತಿ ನಗರದಲ್ಲಿನ ಯಾದವ ನಗರದ ಕ್ರಾಸ್​ ಬಳಿ ನಡೆದಿದೆ.

ಅಯ್ಯನಗೌಡ (28), ಮಹೇಶ (22) ಹಾಗೂ ಉದಯಕುಮಾರ (28) ಮೃತ ದುರ್ದೈವಿಗಳು. ರಮೇಶ್ ಹಾಗೂ ಭೂಷಣ ಎಂಬ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರೆಲ್ಲರೂ ರಾಯಚೂರಿನ ಹೆಗಸನಹಳ್ಳಿ ನಿವಾಸಿಗಳು.

ಹನುಮ ಜಯಂತಿಯ ಪ್ರಯುಕ್ತ ಹನುಮ ಮಾಲಾಧಾರಿಗಳು ಕೃಷ್ಣಾ ನದಿಗೆ ನೀರು ತರಲು ಹೋಗಿದ್ದರು. ಬೆಳಗಿನ ಜಾವ 5 ಗಂಟೆಯ ಸುಮಾರಿನಲ್ಲಿ ಯಮರೂಪಿಯಾಗಿ ಬಂದ ಬೊಲೆರೋ ವಾಹನ ಅವರಿಗೆ ಡಿಕ್ಕಿ ಹೊಡೆದಿದೆ. ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ.

ಇನ್ನೂ ಘಟನಾ ಸ್ಥಳಕ್ಕೆ ಶಕ್ತಿ ನಗರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಶಕ್ತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES