ಕೊಪ್ಪಳ : ಸಚಿವ ಶಿವರಾಜ್ ತಂಗಡಗಿ ಮಂತ್ರಿ ಅಲ್ಲ, ಅವನ್ನೊಬ್ಬ ಕಂತ್ರಿ. ತಂಗಡಗಿಯನ್ನು ಮಂತ್ರಿ ಅನ್ನಬೇಕೋ? ಕಂತ್ರಿ ಅನ್ನಬೇಕೋ? ಆ ಭಗವಂತನಿಗೆ ಗೊತ್ತು ಎಂದು ಶಾಸಕ ಜನಾರ್ದನ ರೆಡ್ಡಿ ವಾಗ್ದಾಳಿ ನಡೆಸಿದರು.
ಕೊಪ್ಪಳದಲ್ಲಿ ಮಾತನಾಡಿರುವ ಅವರು, ಕಾಂಗ್ರೆಸ್ ಪಕ್ಷ ಅಂದ್ರೆ, ಅದು ಸಂಸ್ಕೃತಿ ಇಲ್ಲದ ಪಕ್ಷ. ಕಾಂಗ್ರೆಸ್ ಅನ್ನೋದು ಇಟಲಿ ಪಕ್ಷ. ಇದೇ ರೀತಿ ಮೋದಿ ವಿರುದ್ದ ಸಚಿವ ಶಿವರಾಜ್ ತಂಗಡಗಿ ಮಾತನಾಡಿದ್ರೆ, ಜನರು ಮಂತ್ರಿ ಅಂತ ಕರೆಯೋಲ್ಲ. ಕಂತ್ರಿ ಎಂದೇ ಕರೆಯುತ್ತಾರೆ ಎಂದು ಕಿಡಿಕಾರಿದ್ದಾರೆ.
ತಂಗಡಗಿ ಕಪಾಳಕ್ಕೆ ನಾವು ಹೊಡೆಯೋದು ಬೇಕಾಗಿಲ್ಲ. ಅದು ನಮ್ಮ ಸಂಸ್ಕಾರ ಅಲ್ಲ, ಅದು ನಮ್ಮ ಸಂಸ್ಕೃತಿಯೂ ಅಲ್ಲ. ಮೋದಿ ಬಗ್ಗೆ ಕೆಟ್ಟದಾಗಿ ಮಾತನಾಡೋ ತಂಗಡಗಿಗೆ ಬುದ್ದಿವಾದ ಹೇಳೋ ಸಂಸ್ಕಾರ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ. ನಾವೇಲ್ಲ ಮೋದಿಗೆ ವೋಟು ಹಾಕಬೇಕು. ವೋಟು ಹಾಕುವ ಮೂಲಕ ಶಿವರಾಜ್ ತಂಗಡಗಿ ಅವರ ಎರಡು ಕಪಾಳಕ್ಕೆ ಟಪಾರ್.. ಟಪಾರ್.. ಅಂತ ಹೊಡದಂಗೆ ಆಗಬೇಕು ಎಂದು ಛೇಡಿಸಿದ್ದಾರೆ.
ದುಡ್ಡು ಕೊಡೋ ಸಿಎಂ ಬೇಕಾಗಿದ್ದಾರೆ
ಚುನಾವಣೆ ಮುಗಿದ ತಕ್ಷಣ ಯಾವಾಗ ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಇಳಿಸಬೇಕು ಎಂದು ರಾಹುಲ್ ಗಾಂಧಿ ಕಾಯ್ತಾ ಇದ್ದಾರೆ. ಸಿದ್ದರಾಮಯ್ಯನವರು ಯಾರ ಬಳಿ ದುಡ್ಡು ತೆಗೆದುಕೊಳ್ಳೋದಿಲ್ಲ. ದುಡ್ಡು ಸಹ ಕೊಡೋದಿಲ್ಲ. ಆದ್ರೆ, ಹೈಕಮಾಂಡ್ಗೆ ದುಡ್ಡು ಕೊಡೋ ಸಿಎಂ ಬೇಕಾಗಿದ್ದಾರೆ. ಅದಕ್ಕೆ ಡಿ.ಕೆ ಶಿವಕುಮಾರ್ ನಂತಹ ದುಡ್ಡು ಮಾಡೋ ಸಿಎಂ ಬೇಕು. ಅದಕ್ಕಾಗಿ ರಾಹುಲ್ ಗಾಂಧಿ ಡಿ.ಕೆ. ಶಿವಕುಮಾರ್ ಅವರನ್ನು ಸಿಎಂ ಮಾಡಲು ಕಾಯ್ತಿದ್ದಾರೆ ಎಂದ ಜನಾರ್ದನ ರೆಡ್ಡಿ ಚಾಟಿ ಬಿಸಿದ್ದಾರೆ.