ಬೆಂಗಳೂರು : ಶುಭ ಘಳಿಗೆ, ಶುಭ ಮುಹೂರ್ತದಲ್ಲಿ ಹೇಳ್ತಿದ್ದೀನಿ. ನಾವು ಬೆಂಗಳೂರು ಗ್ರಾಮಾಂತರದಲ್ಲಿ ನನ್ನ ಸಹೋದರ ಡಿ.ಕೆ. ಸುರೇಶ್ ಗೆಲ್ಲುತ್ತಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅವರೇನು 3+1 ಬೋನಸ್ ಅಂತಿದ್ದಾರೆ. ಆ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುತ್ತೆ. ಕೋಲಾರ, ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರದಲ್ಲಿ ನಾವೇ ಗೆಲ್ಲುವುತ್ತೇವೆ ಎಂದು ಜೆಡಿಎಸ್ ನಾಯಕರಿಗೆ ಟಾಂಗ್ ಕೊಟ್ಟರು.
ಬಿಜೆಪಿಯವರ ಪಿಕ್ ಪಾಕೆಟ್ ಜಾಹೀರಾತು ಕೊಟ್ಟಿದ್ದಾರೆ. ಅವರು ಪಿಕ್ ಪಾಕೆಟ್ ಮಾಡಿ, ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ವಿದ್ಯುತ್ ಬಿಲ್ ಜೀರೋ ಮಾಡಿದ್ದೇವೆ. ಪಾಪ ನಮ್ಮ ಚೊಂಬನ್ನ ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಮಾಡ್ಲಿ.. ಮಾಡ್ಲಿ.. ಎಂದು ಡಿಕೆಶಿ ನಕ್ಕರು.
ಕಣ್ಣೀರು ಹಾಕುವ ಪರಿಸ್ಥಿತಿ ಏನೂ ಇಲ್ಲ
ಇದೇ ವೇಳೆ ದೇವೇಗೌಡರ ವಿರುದ್ಧ ವ್ಯಂಗ್ಯ ಮಾಡಿದರು. ಕಣ್ಣೀರು ಹಾಕುವ ಪರಿಸ್ಥಿತಿ ಏನೂ ಇಲ್ಲ. ಅವರ ಹತ್ತಿರ ಹೇಳಲು ಕೊಡುಗೆ ಏನೂ ಇಲ್ಲ. ಕಣ್ಣೀರು ಹಾಕ್ತಾರೆ. ದೇವೇಗೌಡರನ್ನ ಸಿಎಂ ಮಾಡಿದ್ದು ಹಾಸನ ಜನ ಅಲ್ಲ, ಬೆಂಗಳೂರು ಗ್ರಾಮಾಂತರ ಜನ. ಅವರು ರಾಜಕಾರಣ ಮಾಡಲಿ, ಪ್ರಚಾರ ಮಾಡಲಿ ತಪ್ಪೇನಿಲ್ಲ ಎಂದು ಹೇಳಿದರು.
ಹೆಣ ಹೊರುವುದಕ್ಕೆ ಯಾರೂ ಬರಲಿಲ್ಲ
ನಾವು ಇವತ್ತು ರಾಜಕಾರಣ ಮಾಡ್ತಿಲ್ಲ. ಕೋವಿಡ್ ಸಮಯದಲ್ಲಿ ಬೆಂಗಳೂರು ಗ್ರಾಮಾಂತರದಲ್ಲಿ ಹೆಣ ಹೊರುವುದಕ್ಕೆ, ಸಾಗಿಸುವುದಕ್ಕೆ ಯಾರೂ ಬರಲಿಲ್ಲ. ಈಗ ಚುನಾವಣೆ ಅಲ್ವಾ..? ದಿನ ಬರ್ತಾರೆ, ಬರಲಿ ಎಂದು ಡಿ.ಕೆ. ಶಿವಕುಮಾರ್ ಕುಟುಕಿದರು.