ಬೆಂಗಳೂರು : ಭೀಕರ ಬರದಿಂದ ರೈತರ ಒಡನಾಡಿಯಾದ ಜಾನುವಾರುಗಳಿಗೆ ಮೇವು ಇಲ್ಲದಾಗಿದೆ. ಇದರಿಂದ ಅನ್ನದಾತ ಸಂಕಷ್ಟಕ್ಕೆ ಸಿಲುಕಿದ್ದು, ನಟ ವಿನೋದ್ ರಾಜ್ ಅವರಿಗೆ ಆಸರೆಯಾಗಿದ್ದಾರೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಕೆ.ಆರ್. ಪೇಟೆಯಲ್ಲಿ ರೈತರು ಜಾನುವಾರುಗಳಿಗೆ ಮೇವು ಒದಗಿಸಲಾಗದೇ ಸಂಕಷ್ಟದಲ್ಲಿ ಸಿಲುಕಿದ್ದರು. ಮಳೆ ಕೊರತೆ ಹಾಗೂ ಬರಗಾಲದಿಂದ ಜಾನುವಾರುಗಳಿಗೆ ಮೇವಿನ ಸಮಸ್ಯೆ ಇರುವುದನ್ನು ಮನಗಂಡ ನಟ ವಿನೋದ್ ರಾಜ್ ಅವರು ಮೇವು ವಿತರಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ನೆಲಮಂಗಲದಿಂದ ಒಂದು ಟ್ರಕ್ ಒಣ ಹುಲ್ಲಿನ ಲೋಡ್ ಜೊತೆ ಕೆ.ಆರ್. ಪೇಟೆಗೆ ವಿನೋದ್ ರಾಜ್ ತೆರಳಿದ್ದಾರೆ. ಈ ಮೂಲಕ ಶ್ರೀರಂಗಪಟ್ಟಣದ ಕೆ.ಆರ್. ಪೇಟೆಯಲ್ಲಿನ ರೈತರ ಸಂಕಷ್ಟಕ್ಕೆ ವಿನೋದ್ ರಾಜ್ ಸಹಾಯ ಹಸ್ತ ಚಾಚಿದ್ದಾರೆ.
ಲೀಲಾವತಿ ಪುತ್ರನ ಸಾರ್ಥಕ ಜೀವನ
ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲ್ಲೂಕು ವ್ಯಾಪ್ತಿಯ ಹಳ್ಳಿಗಳಿಗೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿದ್ದಾರೆ. ಈ ವೇಳೆ ರೈತರು ಮಳೆಯಿಲ್ಲದೆ ಜಾನುವಾರುಗಳ ಮೇವಿಗೂ ಬಂದಿದೆ ಎಂದು ವಿನೋದ್ ರಾಜ್ ಅವರ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ತಾವೂ ಸಹ ಒಬ್ಬ ರೈತರಾಗಿರುವುದರಿಂದ ಅನ್ನದಾತರ ಸಂಕಷ್ಟದಲ್ಲಿ ವಿನೋದ್ ರಾಜ್ ಸಹ ಭಾಗಿಯಾಗಿದ್ದಾರೆ. ಇದು ನಿಜಕ್ಕೂ ಲೀಲಾವತಿಯವರ ಪುತ್ರನ ಸಾರ್ಥಕ ಜೀವನ. ವಿನೋದ್ ರಾಜ್ ನಡೆ ಇತರರಿಗೂ ಸ್ಫೂರ್ತಿ ಮತ್ತು ಮಾದರಿಯಾಗಿದೆ.