ಮಂಡ್ಯ : ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರು ಗೆಲ್ಲಲು ಏನು ಕಾರಣ ಎಂಬುವುದನ್ನು ನಟ ದರ್ಶನ್ ಬಹಿರಂಗಪಡಿಸಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ತಾನು ಯಾಕೆ ಪ್ರಚಾರ ಮಾಡುತ್ತಿದ್ದೇನೆ ಎಂಬ ಬಗ್ಗೆಯೂ ನಟ ದರ್ಶನ್ ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆ ನಾಗಮಂಗಲದ ಬೆಳ್ಳೂರು ರೋಡ್ ಶೋನಲ್ಲಿ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು ಸಾಕಷ್ಟು ಸಹಾಯ ಮಾಡಿದ್ದಾರೆ. ಆ ಋಣ ತೀರಿಸಲು ಸ್ಟಾರ್ ಚಂದ್ರು ಪರ ಪ್ರಚಾರ ಮಾಡುತ್ತಿರುವೆ ಎಂದು ಸ್ಪಷ್ಟಪಡಿಸಿದ್ದಾರೆ.
ಋಣ ತೀರಿಸಲು ‘ಕೈ’ ಪರ ಪ್ರಚಾರ
ನಾನು ಇಂದು ಕಾಂಗ್ರೆಸ್ ಪರ ಬಂದಿರೋದಕ್ಕೆ ಒಂದೇ ಕಾರಣ. ಕಳೆದ 2019ರ ಚುನಾವಣೆಯಲ್ಲಿ ಚಲುವಣ್ಣ ನಮ್ಮ ಹಿಂದೆ ನಿಂತು ಸಹಾಯ ಮಾಡಿದ್ದರು. ಆ ಋಣವನ್ನು ನಾನು ಸಾಯೋವರೆಗೂ ಮರೆಯಲ್ಲ. ಕಳೆದ ಚುನಾವಣೆಯಲ್ಲಿ ಚಲುವಣ್ಣ ಮಾಡಿದ ಸಹಾಯವನ್ನು ಏಳು ಜನ್ಮವಾದರೂ ತೀರಿಸೋಕೆ ಆಗಲ್ಲ. ಚಲುವಣ್ಣ ಅವರ ಕೈಯನ್ನು ಈಗ ನೀವು ಬಲಪಡಿಸಿ. ಸ್ಟಾರ್ ಚಂದ್ರು ಅವರಿಗೆ ಮತ ಹಾಕಿ ಎಂದು ಮನವಿ ಮಾಡಿದ್ದಾರೆ.
ಮಂಡ್ಯದಲ್ಲಿ ಡಿ ಬಾಸ್ ಹವಾ
ಮಂಡ್ಯದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹವಾ ಮುಂದುವರಿದಿದೆ. ಕೈನೋವಿನ ನಡುವೆಯೂ ಇಂದು ನಾಗಮಂಗಲ, ಮೇಲುಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಟ ದರ್ಶನ್ ರೋಡ್ ಶೋ ನಡೆಸಿದ್ದಾರೆ. ಕೃಷಿ ಸಚಿವ ಚಲುವರಾಯಸ್ವಾಮಿ ಜೊತೆ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಪ್ರಚಾರ ನಡೆಸಿದ್ದಾರೆ.
ಡಿ ಬಾಸ್ಗೆ ದರ್ಶನ್ ಸಾಥ್
ನಾಗಮಂಗಲ ಟೌನ್, ಬೆಳ್ಳೂರು, ಕದಬಹಳ್ಳಿ, ಬಿಂಡಿಗನವಿಲೆ, ಅದ್ದಿಹಳ್ಳಿ ಸರ್ಕಲ್, ಬ್ರಹ್ಮದೇವರಹಳ್ಳಿ, ಚೀಣ್ಯ ಸೇರಿದಂತೆ ಹಲವೆಡೆ ದರ್ಶನ್ ಮತಯಾಚನೆ ನಡೆಸಿದ್ದಾರೆ. ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30 ರವೆಗೆ ನಾಗಮಂಗಲ ವ್ಯಾಪ್ತಿಯಲ್ಲಿ ರೋಡ್ ಶೋ ನಡೆಸಿದ್ದಾರೆ. ಮಧ್ಯಾಹ್ನ 3.30 ರಿಂದ ಮೇಲುಕೋಟೆ ಕ್ಷೇತ್ರದಲ್ಲೂ ಪ್ರಚಾರ ನಡೆಸಿದ್ದಾರೆ. ಹೊಳಲು, ಶಿವಳ್ಳಿ, ದುದ್ದ, ಬೇವುಕಲ್ಲು, ಜಕ್ಕನಹಳ್ಳಿ ಕ್ರಾಸ್ನಲ್ಲಿ ಡಿ ಬಾಸ್ ಭರ್ಜರಿ ಕ್ಯಾಂಪೇನ್ ನಡೆಸಿದ್ದಾರೆ. ಸಂಜೆ 6.30ಕ್ಕೆ ಪಾಂಡವಪುರ ಟೌನ್ನಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಜೊತೆ ನಟ ದರ್ಶನ್ ಮತಬೇಟೆ ನಡೆಸಲಿದ್ದಾರೆ.