ಉಡುಪಿ : ದೇಶದಲ್ಲೀಗ ಇರುವುದು ಎರಡೇ ಮಾದರಿ. ಒಂದು ಕಾಂಗ್ರೆಸ್ನ ಗ್ಯಾರಂಟಿ ಮಾದರಿ, ಇನ್ನೊಂದು ಬಿಜೆಪಿಯವರ ಚೊಂಬು ಮಾದರಿ ಎಂದು ಕಾಂಗ್ರೆಸ್ ನಾಯಕ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಲೇವಡಿ ಮಾಡಿದ್ದಾರೆ.
ಉಡುಪಿಯಲ್ಲಿ ಚೊಂಬು ಹಿಡಿದು ಸುದ್ದಿಗೋಷ್ಠಿ ನಡೆಸಿದ ಅವರು, ನಾವು ರಾಜ್ಯದ ರೈತರಿಗೆ ಅನುಕೂಲವಾಗಲು ಬರ ಪರಿಹಾರ ಕೇಳಿದ್ವಿ. ಆದರೆ, ಮೋದಿ ನಮಗೆ ಚೊಂಬು ಕೊಟ್ರು ಎಂದು ಕುಟುಕಿದ್ದಾರೆ.
15ನೇ ಹಣಕಾಸು ಆಯೋಗದ 58,000 ಕೋಟಿ ರೂ. ಕೇಳಿದ್ವಿ. ಆದರೆ, ಮೋದಿ ನಮಗೆ ಚೊಂಬು ಕೊಟ್ರು. ರಾಜ್ಯದಿಂದ ನೂರು ರೂಪಾಯಿ ತೆರಿಗೆ ಕಟ್ಟಿದ್ರೆ ನಮಗೆ ಕೇವಲ 13 ರೂ. ಕೊಡ್ತಿದ್ದಾರೆ. ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಕೇಳಿದ್ವಿ. ಆದ್ರೆ, ಮೋದಿ ನಮಗೆ ಚೊಂಬು ಕೊಟ್ರು ಎಂದು ವ್ಯಂಗ್ಯವಾಡಿದ್ದಾರೆ.
ಸುಳ್ಳಿನ ಚಾಂಪಿಯನ್ ಯಾರು ಅಂದ್ರೆ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ತಿಳಿವಳಿಕೆ ಇಲ್ಲ, ಅದಕ್ಕೆ ಕೊರಿಯರ್ ಮೂಲಕ ಪ್ರಣಾಳಿಕೆಯನ್ನ ಕಳಿಸಿದ್ದೇವೆ ಎಂದು ಕಾಂಗ್ರೆಸ್ ಯುವ ಘಟಕದ ಬಿ.ವಿ. ಶ್ರೀನಿವಾಸ್ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ಸಭೆಗಳಲ್ಲಿ ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿ ಕೊಟ್ಟಿರುವುದು ಐತಿಹಾಸಿಕ ಸಾಧನೆಯಾಗಿದೆ ಎಂದರು.
ಮೋದಿ, ಬಿಜೆಪಿಯವರಿಗೆ ಭಯ ಬಂದಿದೆ
ಭಾರತ್ ಜೋಡೋ ಯಾತ್ರೆಯಲ್ಲಿ ಎಲ್ಲಾ ಬಡವರು, ಮಹಿಳೆಯರ ನಾಡಿಮಿಡಿತ ಅರಿತುಕೊಂಡಿದ್ದೇವೆ. ಎಲ್ಲಾ ವರ್ಗದವರನ್ನ ಗಮನದಲ್ಲಿಟ್ಟುಕೊಂಡು ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯವರಿಗೆ ಭಯ ಬಂದಿದೆ. ಈ ಬಾರಿ ಜನರು ಇವರಿಗೆ ತಕ್ಕ ಪಾಠ ಕಲಿಸುತ್ತಾರೆ. ಸುಳ್ಳಿನ ಚಾಂಪಿಯನ್ ಯಾರು ಅಂದ್ರೆ ನರೇಂದ್ರ ಮೋದಿ ಎಂದು ಕಿಡಿಕಾರಿದ್ದಾರೆ.