ಬಳ್ಳಾರಿ : ಸರ್ಕಾರಿ ವೈದ್ಯರು ಸರಿಯಾದ ಚಿಕಿತ್ಸೆ ನೀಡದೇ ತೋರಿದ ನಿರ್ಲಕ್ಷ್ಯದಿಂದಾಗಿ ಗರ್ಭಿಣಿ ಹೆರಿಗೆಯ ನಂತರ ಮೃತಪಟ್ಟಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಸರ್ಕಾರಿ ಆಸ್ಪತ್ರೆ ಎಂದರೇ ಸಾರ್ವಜನಿಕರಿಗೆ ನಂಬಿಕೆ ಇಲ್ಲದಂತೆಯಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯಯಿಂದ ಸರಿಯಾದ ಚಿಕಿತ್ಸೆ ದೊರೆಯದೇ ಮೃತಪಟ್ಟಿರುವ ಘಟನೆ ಗಣಿನಾಡು ಬಳ್ಳಾರಿ ಜಿಲ್ಲೆಯ ಮೋಕ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ರಾಜಮ್ಮ ಎನ್ನುವ ಮಹಿಳೆ ತನ್ನ ಎರಡನೇ ಹೆರಿಗೆಗೆ ತವರು ಮನೆಯಾದ ಸಿಂಧೂವಾಳ ಗ್ರಾಮಕ್ಕೆ ಬಂದಿದ್ದರು. ಹೆರಿಗೆ ನೋವು ಕಾಣಿಸಿಕೊಂಡ ಕೂಡಲೇ ಕುಟುಂಬದ ಸದಸ್ಯರು ಮೋಕ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ಚಿಕಿತ್ಸೆ ನೀಡಬೇಕಾದ ಡಾಕ್ಟರ್ ಪರಿಮಳ ಅವರು ಸರಿಯಾದ ಚಿಕಿತ್ಸೆ ನೀಡದೇ, ಪೋನ್ ಕಾಲ್ ಬಂದ ಕೂಡಲೇ ಬಳ್ಳಾರಿಗೆ ವಾಪಸ್ ಬಂದಿರುವುದೇ ರಾಜಮ್ಮನ ಸಾವಿಗೆ ಕಾರಣವಾಗಿದೆ.
ಇಬ್ಬರು ಮಕ್ಕಳು ಅನಾಥ
ಚಿಕಿತ್ಸೆಗಾಗಿ ಹೋದ ರಾಜಮ್ಮ ಸುಮಾರು 45 ದಿನಗಳ ನಂತರ ಹೆಣವಾಗಿ ಮನೆಗೆ ವಾಪಸ್ ಆಗಿದ್ದಾರೆ. ಎರಡು ಮುದ್ದಾದ ಮಕ್ಕಳಿರುವ ಸುಂದರ ಕುಟುಂಬ ಹೊಂದಿದ್ದ ರಾಜಮ್ಮ ಸಣ್ಣ ವಯಸ್ಸಿನಲ್ಲೇ ತೀರಿಕೊಂಡಿರುವುದು ಕುಟುಂಬವರ ದುಖ ಹೆಚ್ಚಿಸಿದೆ. ಜೊತೆಯಾಗಿ ಬಾಳ ಬೇಕಾದ ತಾಯಿ ರಾಜಮ್ಮ ಇಂದು ಹೆಣವಾಗಿ ವಾಪಸ್ ಆಗಿರುವುದರಿಂದ ಮಕ್ಕಳು ಅನಾಥವಾಗಿವೆ. ಇದಕ್ಕೆ ಕಾರಣ ಮೋಕ ಪಿಎಚ್ ಸಿಯ ವೈದ್ಯರಾದ ಡಾ.ಪರಿಮಳ ಅವರ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಕುಟುಂಬಸ್ಥರ ನೇರ ಆರೋಪವಾಗಿದೆ.
ವೈದ್ಯೆ ಮೇಲೆ ಈ ರೀತಿ ಆರೋಪ ಹೊಸತೆನಲ್ಲ
ಕರ್ತ್ಯವ್ಯ ನಿರ್ವಹಿಸುವ ಸ್ಥಳದಲ್ಲಿ ವೈದ್ಯರು ಇರಬೇಕು ಎಂಬ ಕಾನೂನು ಇದೆ. ಅಷ್ಟೇ ಅಲ್ಲದೇ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತ್ಯವ್ಯ ನಿರ್ವಹಿಸುವವರು ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುವಂತೆಯಿಲ್ಲ. ಆದರೆ ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿರುವ ಪರಿಮಳ ಅವರು ತಾವು ಕರ್ತ್ಯವ್ಯ ನಿರ್ವಹಿಸುವ ಬಳ್ಳಾರಿ ನಗರದ ಮೋಕ ರಸ್ತೆಯಲ್ಲಿರುವ ದೇಸಾಯಿ ಆಸ್ಪತ್ರೆಯಿಂದ ಪೋನ್ ಬಂದ ಕೂಡಲೇ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡದೇ ಹೋಗುತ್ತಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಅದೇನೆ ಇರಲಿ, ಪರಿಮಳ ಮೇಲೆ ಈ ರೀತಿಯ ಆರೋಪಗಳು ಕೇಳಿ ಬರುತ್ತಿರುವುದು ಹೊಸತೆನಲ್ಲ. ಈ ಹಿಂದೆ ಸಾಕಷ್ಟು ಆರೋಪಗಳು ಕೇಳಿಬಂದಿವೆ. ಅಷ್ಟೇ ಅಲ್ಲದೇ ಸಾರ್ವಜನಿಕರಿಂದ ಕೇಸುಗಳು ಸಹ ದಾಖಲಾಗಿವೆ. ಆದರೆ, ಸಂಬಂಧ ಪಟ್ಟ ಇಲಾಖೆಯವರ ಯಾವುದೇ ಕ್ರಮಕೈಗೊಳದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.