ಹುಬ್ಬಳ್ಳಿ : ನೇಹಾ ಹತ್ಯೆ ಪ್ರಕರಣ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಮತ್ತೊಂದು ದೌರ್ಜನ್ಯ ಘಟನೆ ನಡೆದಿದೆ. ಹಿಂದೂ ಯುವತಿ ಮೇಲೆ ಅನ್ಯಕೋಮಿನ ಯುವಕ ಹಲ್ಲೆ ಮಾಡಿದ್ದಾನೆ.
ಹುಬ್ಬಳ್ಳಿಯ ಕೇಶ್ವಾಪುರ ಠಾಣಾ ವ್ಯಾಪ್ತಿಯಲ್ಲಿ ಪ್ರೀತಿ ತಿರಸ್ಕರಿಸಿದ್ದಕ್ಕೆ ಹಿಂದೂ ಯುವತಿ ಮೇಲೆ ಮುಸ್ಲಿಂ ಯುವಕ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಅಫ್ತಾಬ್ ಶಿರಹಟ್ಟಿ ಎಂಬ ಯುವಕ ಹಿಂದೂ ಯುವತಿ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಬಗ್ಗೆ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಾಳೆ.
ಈ ಬಗ್ಗೆ ಹಲ್ಲೆಗೊಳಗಾದ ಯುವತಿ ಪ್ರತಿಕ್ರಿಯಿಸಿದ್ದಾಳೆ. ಹಲ್ಲೆ ಮಾಡಿರುವ ಅಫ್ತಾಬ್ ನನಗೆ ಎರಡು ವರ್ಷಗಳಿಂದ ಪರಿಚಯ. ನನ್ನ ಪ್ರೀತಿ ಮಾಡು ಅಂತ ಎರಡು ವರ್ಷಗಳಿಂದ ನನ್ನ ಹಿಂದೆ ಬಿದ್ದಿದ್ದ. ಆದರೆ, ಅವನ ಮತ್ತು ನನ್ನ ನಡುವೆ ಗೆಳತನ ಇತ್ತು. ನನ್ನ ಮುಸ್ಲಿಂ ಗೆಳೆತಿ ಅಫ್ತಾಬ್ನನ್ನು ಪರಿಚಯ ಮಾಡಿಕೊಟ್ಟಿದ್ದಳು. ನಾನು ಪಿಯುಸಿ ಓದುತ್ತಿದ್ದಾಗಿಂದಲೂ ಪರಿಚಯ ಎಂದು ತಿಳಿಸಿದ್ದಾಳೆ.
ನೇಹಾ ಕೇಸ್ ಆದಾಗಿನಿಂದ ಭಯ ಆಗಿತ್ತು
ಇನ್ನು ನನ್ನ ಬರ್ತಡೇ ಮತ್ತು ರಂಜಾನ್ ಹಬ್ಬಕ್ಕೆ ಬಲವಂತವಾಗಿ ಗಿಫ್ಟ್ ಕೊಟ್ಟಿದ್ದ. ಆದರೆ, ನೇಹಾ ಪ್ರಕರಣ ಆದಾಗಿನಿಂದ ನನಗೆ ಭಯ ಆಗಿತ್ತು. ಹೀಗಾಗಿ, ಅವನ ಗೆಳತನ ಕಳೆದುಕೊಳ್ಳಲು ನಿರ್ಧಾರ ಮಾಡಿದ್ದೆ. ಈ ವಿಚಾರ ಅಫ್ತಾಬ್ಗೆ ತಿಳಿಸಿದ್ದೆ. ಇವತ್ತು ಅವನೇ ಕಾಲ್ ಮಾಡಿ ಹಣ್ಣಿನ ಅಂಗಡಿ ಹತ್ತಿರ ಬರಲು ತಿಳಿಸಿದ್ದ. ನಾನು ಅವನ ಅಂಗಡಿ ಹತ್ತಿರ ಬಂದು ಅವನ ಗಿಫ್ಟ್ ವಾಪಸ್ ನೀಡಿದೆ. ಈ ವೇಳೆ ಆತ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ. ಆರೋಪಿಗೆ ಶಿಕ್ಷೆ ಆಗಬೇಕೆಂದು ಯುವತಿ ತಿಳಿಸಿದ್ದಾಳೆ.