ಬೆಂಗಳೂರು : ರಾಜ್ಯದಲ್ಲಿ ಇತ್ತೀಚೆಗೆ ಹಿಂದೂಗಳ ಮೇಲೆ ನಡೆದ ಘಟನೆಗಳನ್ನು ಪ್ರಸ್ತಾಪ ಮಾಡಿ ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿ, ಕರ್ನಾಟಕದಲ್ಲಿ ಯಾವ ರೀತಿಯ ವಿಚಾರಗಳಿಗೆ ಕಾಂಗ್ರೆಸ್ ಕುಮ್ಮಕ್ಕು ಕೊಡ್ತಿದೆಯೋ ಅದು ಅಪಾಯಕಾರಿ ಎಂದು ಕುಟುಕಿದ್ದಾರೆ.
ಇಲ್ಲಿ ನಮ್ಮ ಹೆಣ್ಣು ಮಕ್ಕಳ ಮೇಲೆ ಹಲ್ಲೆಗಳಾಗ್ತಿವೆ (ನೇಹಾ ಹಿರೇಮಠ್ ಕೊಲೆ). ಬೀದಿಗಳಲ್ಲಿ ಬಾಂಬ್ಗಳನ್ನು ಸ್ಫೋಟಿಸಲಾಗ್ತಿದೆ (ರಾಮೇಶ್ವರಂ ಕೆಫೆ ಸ್ಪೋಟ). ಭಜನೆ ಕೀರ್ತನೆ ಕೇಳಿದವರ ಮೇಲೂ ಹಲ್ಲೆ ಮಾಡಲಾಗ್ತಿದೆ (ವಿದ್ಯಾರಣ್ಯಪುರ, ನಗರ್ತಪೇಟೆ ಪ್ರಕರಣಗಳು). ಇವು ಸಾಮಾನ್ಯ ಘಟನೆಗಳಲ್ಲ. ಕರ್ನಾಟಕ, ಬೆಂಗಳೂರಿನ ಜನ ಕಾಂಗ್ರೆಸ್ನಿಂದ ಇದಕ್ಕಾಗಿಯೇ ದೂರ ಇರಬೇಕು ಎಂದು ಮೋದಿ ಕರೆ ನೀಡಿದ್ದಾರೆ.
ಮೋದಿ ಹೆಸರು ಕೆಡಿಸಲು ಕಾಂಗ್ರೆಸ್ ಹುನ್ನಾರ
ಕಾಂಗ್ರೆಸ್ ಹೆಚ್ಎಎಲ್ ವಿಚಾರದಲ್ಲಿ ಏನೆಲ್ಲ ಆರೋಪ ಮಾಡಿತ್ತು? ಮೋದಿ ಹೆಸರು ಕೆಡಿಸಲು ಕಾಂಗ್ರೆಸ್ ಮುಂದಾಗಿತ್ತು. ಅದೇ ಹೆಚ್ಎಎಲ್ ಈಗ ಅನೇಕ ಸಾಧನೆ ಮಾಡಿದೆ. ರಾಜ್ಯದಲ್ಲಿ ದೊಡ್ಡ ಹೆಲಿಕಾಪ್ಟರ್ ನಿರ್ಮಾಣ ಕೈಗಾರಿಕೆ ಹೆಚ್ಎಎಲ್ ಸ್ಥಾಪಿಸಿದೆ. ಕಾಂಗ್ರೆಸ್ ತಂತ್ರಜ್ಞಾನದ ವಿರೋಧಿಯಾಗಿದೆ. ಇಡೀ ಜಗತ್ತು ಡಿಜಿಟಲ್ ಇಂಡಿಯಾ ಶ್ಲಾಘಿಸ್ತಿದೆ ಎಂದು ಚಾಟಿ ಬೀಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ನೀತಿಗಳು ಅಪಾಯಕಾರಿ
ಕಾಂಗ್ರೆಸ್ ಕೊರೋನಾ ವೇಳೆ ವ್ಯಾಕ್ಸಿನ್ ವಿರುದ್ಧ ಅಪಪ್ರಚಾರ ಮಾಡಿತು. ಇಲ್ಲಿ ಕಾಂಗ್ರೆಸ್ ಸರ್ಕಾರದ ನೀತಿಗಳು ಅಪಾಯಕಾರಿಯಾಗಿವೆ. ಮೋದಿಯನ್ನು ತಿರಸ್ಕರಿಸಿ ಅಂತ ಇಂಡಿಯ ಕೂಟ ಹೇಳ್ತಿದೆ. ಮೋದಿ ಕಾರಣದಿಂದಲೇ ಚಂದ್ರಯಾನ ಬಳಿಕ ಗಗನಯಾತ್ರೆಯ ಗೌರವ ಸಿಕ್ಕಿದೆ. ಕಾಂಗ್ರೆಸ್ ಬಂಡವಾಳ ಹೂಡಿಕೆಯ ವಿರುದ್ಧ ಇದೆ. ಹೀಗಾಗಿ, ಕಾಂಗ್ರೆಸ್ ಗೆಲ್ಲಿಸೋದು ಬೇಡ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.