ಉಡುಪಿ : ಹುಬ್ಬಳ್ಳಿ ವಿದ್ಯಾರ್ಥಿ ನೇಹಾ ಹಿರೇಮಠ ಲವ್ ಜಿಹಾದ್ಗೆ ಬಲಿಯಾಗಿದ್ದಾಳೆ. ಆದರೆ, ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ್ ವೈಯಕ್ತಿಕ ಕಾರಣ ಅಂತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿ ಯುವ ಮೋರ್ಚಾ ಆಯೋಜಿಸಿದ್ದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ದೂರಿದ್ದಾರೆ.
ಮೈಸೂರಿನಲ್ಲಿ ಪ್ರಧಾನಿ ಮೋದಿ ಕುರಿತು ಹಾಡು ಬರೆದಿದ್ದಕ್ಕೆ ಅನ್ಯಕೋಮಿನ ಪುಂಡರು, ದೇಶದ್ರೋಹಿಗಳು ಹಲ್ಲೆ ಮಾಡಿ ಮೂತ್ರವಿಸರ್ಜನೆ ಮಾಡಿದ್ದಾರೆ. ಅಲ್ಪಸಂಖ್ಯಾರ ತುಷ್ಟೀಕರಣ ಈ ಎಲ್ಲಾ ಘಟನೆಗಳಿಗೆ ಕಾರಣ. ರಾಜ್ಯದ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ನಾವು ಕರ್ನಾಟಕದಲ್ಲಿ ಇದ್ದೇವೋ? ಅಥವಾ ತಾಲಿಬಾನ್ನಲ್ಲಿ ಇದ್ದೇವೋ ಎಂಬುದು ಪ್ರಶ್ನೆಯಾಗಿದೆ. ರಾಜ್ಯದಲ್ಲಿ ದರಿದ್ರ ಸರ್ಕಾರ ಇರಬೇಕಾ? ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ಜಾಹೀರಾತು ಮೂಲಕ ಯಾರ ಕಿವಿಗೆ ಹೂವು ಮುಡಿಸ್ತಿದ್ದೀರಿ? ಹಣ, ತೋಳ್ಬಲದಿಂದ ನಿಮಗೆ ಗೆಲ್ಲುವ ಭ್ರಮೆ ಬೇಡ ಎಂದು ಚಾಟಿ ಬೀಸಿದ್ದಾರೆ.
ದಾಖಲೆಯ ಮತಗಳ ಅಂತರಗಳಿಂದ ಗೆಲ್ಲಿಸಿ
ಪ್ರಧಾನಿ ನರೇಂದ್ರ ಮೋದಿ ದೇಶವೇ ನನ್ನ ಪರಿವಾರವೆಂದು ಭಾವಿಸಿ, ಒಂದು ದಿನವೂ ವಿಶ್ರಾಂತಿ ಪಡೆಯದೇ ಭಾರತದ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸುತ್ತಿದ್ದಾರೆ. ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ದೃಷ್ಟಿಯಿಂದ ನಮ್ಮ ಬಿಜೆಪಿ ಕೋಟ ಶ್ರೀನಿವಾಸ್ ಪೂಜಾರಿ ಅವರನ್ನು ದಾಖಲೆಯ ಮತಗಳ ಅಂತರಗಳಿಂದ ಗೆಲ್ಲಿಸಿ ಎಂದು ಬಿ.ವೈ. ವಿಜಯೇಂದ್ರ ಮನವಿ ಮಾಡಿದ್ದಾರೆ.