ಚಾಮರಾಜನಗರ : ಕಾಂಗ್ರೆಸ್ ಚೊಂಬು ಜಾಹಿರಾತಿನ ಬಗ್ಗೆ ಮಾಜಿ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ಗೆ ತಿರುಗೇಟು ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯರಿಗೆ ಚೊಂಬು ಕೊಡಲು ಡಿಸಿಎಂ ಡಿ.ಕೆ. ಶಿವಕುಮಾರ್ ಕಾಯ್ತಿದ್ದಾರೆ. ಡಿಸಿಎಂಗೆ ಚೊಂಬು ಕೊಡಲು ಸಿಎಂ ಕಾಯ್ತಿದ್ದಾರೆ. ಇವರಿಬ್ಬರಿಗೂ ಚೊಂಬು ಕೊಡಲು ಜನ ಕಾಯ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಚೊಂಬುಗಳ ಸರದಾರ ಕಾಂಗ್ರೆಸ್ ಎಂದ ಅವರು, ಚೊಂಬು ವಿಚಾರಕ್ಕೆ ಕಾಂಗ್ರೆಸ್ಸಿಗೆ ಕೆಲವು ಪ್ರಶ್ನೆ ಕೇಳಿದ್ದಾರೆ. ಕಳೆದ 10 ತಿಂಗಳುಗಳಿಂದ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಹಣವನ್ನು ಬಿಡುಗಡೆ ಮಾಡದಿರುವುದು ನಾಗರಿಕರಿಗೆ ನೀವು ಕೊಟ್ಟಿರುವ ಚೊಂಬು ಅಲ್ಲವೇ? ನಿರುದ್ಯೋಗಿ ಯುವಕರಿಗೆ 2,000 ಕೊಡುತ್ತೇವೆಂದು ಭರವಸೆ ನೀಡಿ, ಮತ ಪಡೆದು ಕಳೆದ 10 ತಿಂಗಳಲ್ಲಿ ಒಬ್ಬರಿಗೂ ನಿರುದ್ಯೋಗ ಭತ್ಯೆ ನೀಡದೆ ಚೊಂಬು ನೀಡಿರುವುದು ನೀವಲ್ಲವೇ? ಎಂದು ಕುಟುಕಿದ್ದಾರೆ.
ಅನ್ನದಾತರಿಗೆ ಚೊಂಬು ನೀಡಿರುವುದು ನೀವೇ
ಹಿಂದಿನ ಬಿಜೆಪಿ ಸರ್ಕಾರ ರಾಜ್ಯದ ಪ್ರತಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವರ್ಷಕ್ಕೆ 4 ಸಾವಿರ ರೂಪಾಯಿ ಪ್ರಧಾನಮಂತ್ರಿ ಕಿಸಾನ್ ಸನ್ಮಾನ ಯೋಜನೆ ಅಡಿ ಹಣ ನೀಡಿ ತನ್ನ ಕಾಳಜಿ ತೋರಿತ್ತು. ಏನೂ ಕಾರಣ ನೀಡದೆ ಅದನ್ನು ನಿಲ್ಲಿಸಿ ಈ ಅನ್ನದಾತರಿಗೆ ಚೊಂಬು ನೀಡಿರುವುದು ನೀವೇ ಅಲ್ಲವೇ? ಹೀಗೆ ದೇಶದ ಚೊಂಬುಗಳ ಸರದಾರ ನೀವೇ ಆಗಿರುವಾಗ ಬೇರೆಯವರಿಗೆ ಯಾಕೆ ಆ ಪ್ರಶಸ್ತಿ? ಒಟ್ಟಾರೆ ಕೋತಿ ಮೊಸರನ್ನ ತಿಂದು ಮೇಕೆಯ ಮೂತಿಗೆ ಒರೆಸುವಂತಿದೆ ನಿಮ್ಮ ಚೊಂಬು ನೀತಿ. ನಿಮ್ಮ ಆಡಳಿತದಿಂದ ಬಸವಳಿದಿರುವ ನಾಗರಿಕರು ಬರುವ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಚೊಂಬು ನೀಡುವುದು ಗ್ಯಾರಂಟಿ ಎಂದು ಚಾಟಿ ಬೀಸಿದ್ದಾರೆ.
ಆ ಹುಡುಗಿಯ ನೋವು ಹೇಗಿರಬಹುದು..?
ನೇಹಾ ಕೊಲೆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಕೊಲೆ ನಿಜಕ್ಕೂ ದುರಂತದ ಘಟನೆ. ನಾನು ಸಿಸಿಟಿವಿಯನ್ನ ನೋಡಿದ್ದೇನೆ. ಚಾಕು ಇರಿದಾಗ ಆ ಹುಡುಗಿಯ ನೋವು ಹೇಗಿರಬಹುದು..? ಅದನ್ನ ನೋಡಿದ ತಂದೆ ಮತ್ತು ತಾಯಿಗೆ ಹೇಗೆ ಸಂಕಟ ಆಗಿರಬಹುದು. ಯಾವ ದಾಕ್ಷಿಣ್ಯ ಇಟ್ಟುಕೊಳ್ಳದೇ ಮುಕ್ತವಾಗಿ ವಿಚಾರಣೆ ನಡೆಸಬೇಕು. ಒಂದೊಂದು ಜೀವವೂ ಕೂಡ ಅಮೂಲ್ಯ. ಈ ರೀತಿಯ ದುರುಳರಿಗೆ ಕಠಿಣ ಶಿಕ್ಷೆಯಾಗಬೇಕು. ಸರ್ಕಾರ ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಬೇಕು ಎಂದು ಸುರೇಶ್ ಕುಮಾರ್ ಒತ್ತಾಯಿಸಿದ್ದಾರೆ.