ಬೆಂಗಳೂರು : ಹುಬ್ಬಳ್ಳಿಯ ಕಾಲೇಜು ಕ್ಯಾಂಪಸ್ನಲ್ಲಿ ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕರಣ ದಾಖಲು ಮಾಡಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯಾರೇ ತಪ್ಪು ಮಾಡಿದ್ದರೂ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ. Law will take it own action ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ವಿಪಕ್ಷಗಳ ಹೇಳಿಕೆಗೆ ವಿಚಾರ ಹಾಗೂ ಕರ್ನಾಟಕ ಬಿಹಾರ ಆಗುತ್ತೆ ಎಂದಿದ್ದ ಬೊಮ್ಮಾಯಿ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗಲೂ ರಾಜ್ಯದಲ್ಲಿ ಇಂತಹ ಘಟನೆಗಳು ನಡೆದಿವೆ ಎಂದು ತಿಳಿಸಿದ್ದಾರೆ.
ಗಂಟೆಗೆ, ಘಳಿಗೆಗೆ ಸಿದ್ದಾಂತ ಬದಲಾಗುತ್ತಿದೆ
ರಾಜ್ಯದ ಉದ್ದಗಲಕ್ಕೂ ಕಾಂಗ್ರೆಸ್ ಸೇರ್ಪಡೆ ಆಗ್ತಿದ್ದಾರೆ. ಸ್ಥಳೀಯ ಲೀಡರ್ಗಳಿಗೆ ಆಥರೈಸ್ ಮಾಡಿದ್ದೇನೆ. ಬಿಜೆಪಿ ದಳ ತೊರೆದು ಸರಮಾಲೆಯಂತೆ ಕಾಂಗ್ರೆಸ್ ಕಡೆ ಬರ್ತಿದ್ದಾರೆ. ಬಿಜೆಪಿಯವರಿಗೆ ಯಾವುದೇ ಧ್ವನಿ ಇಲ್ಲ, ಧ್ವನಿ ಕಳೆದುಕೊಂಡಿದ್ದಾರೆ. ಯಾರು ಯಾರು ನಮ್ಮ ಪಕ್ಷಕ್ಕೆ ಕಂಡಿಷನ್ ಇಲ್ಲದೇ ಬರ್ತಿದ್ದಾರೆ ಎಲ್ಲರಿಗೂ ಸ್ವಾಗತ. ಸ್ಥಳೀಯ ಮಟ್ಟದಲ್ಲೇ ಯಾರು ಬೇಕಾದರೂ ಕಾಂಗ್ರೆಸ್ ಸೇರಬಹುದು. ಗಂಟೆಗೆ ಘಳಿಗೆಗೆ ಜೆಡಿಎಸ್ ಸಿದ್ದಾಂತ ಬದಲಾಗುತ್ತಿದೆ. ಅದಕ್ಕಾಗಿಯೇ ಹಲವಾರು ಲೀಡರ್ಗಳು ನಮ್ಮ ಕಡೆ ಬರ್ತಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.