ತುಮಕೂರು : ಹುಬ್ಬಳ್ಳಿಯಲ್ಲಿ ಕಾಲೇಜು ವಿದ್ಯಾರ್ಥಿನಿ ಕೊಲೆ ಪ್ರಕರಣದ ಬಗ್ಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ತುಮಕೂರಿನಲ್ಲಿ ಮಾತನಾಡಿ, ಹುಬ್ಬಳ್ಳಿ ಘಟನೆ ಲವ್ ಅಫೇರ್. ಇಬ್ಬರು ಒಟ್ಟಿಗೆ ಕೆಲಸ ಮಾಡ್ತಾ ಇದ್ದರು. ಪರಸ್ಪರ ಒಬ್ಬರನೊಬ್ಬರು ಪ್ರೀತಿಸುತ್ತಾ ಇದ್ದರು. ನಂತರ ಇದ್ದಕ್ಕಿದ್ದಂತೆ ಆ ಹೆಣ್ಣು ಮಗಳು ದೂರ ಆಗೋದಕ್ಕೆ ಪ್ರಯತ್ನಿಸಿದಾಗ ಘಟನೆ ನಡೆದಿದೆ ಎಂದು ಹೇಳಿದ್ದಾರೆ.
ಮಗಳನ್ನು ಫಾಲೋ ಮಾಡ್ತಾ ಇದ್ದ ತಾಯಿ ಮೇಲೂ ಹಲ್ಲೆ ಮಾಡಿದ್ದಾರೆ. ಅವರನ್ನು ರಕ್ಷಣೆ ಮಾಡಲಾಗಿದೆ. ಈ ಘಟನೆಗೂ ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ. ಇಂಥಹ ಘಟನೆಗಳು ಆಕಸ್ಮಿಕವಾಗಿ ನಡೆಯುತ್ತವೆ. ಅಂಥವರ ವಿರುಧ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಇಬ್ಬರ ನಡುವೆ ಪರಸ್ಪರ ಪ್ರೀತಿ ಇತ್ತು
ಹುಬ್ಬಳ್ಳಿ ಘಟನೆ ಲವ್ ಜಿಹಾದ್ ಎಂಬ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆಗೆ, ಅದು ಇಬ್ಬರ ನಡುವೆ ಪರಸ್ಪರ ಪ್ರೀತಿ ಉಂಟಾಗಿದೆ. ಯಾವಾಗ ಆ ಹೆಣ್ಣು ಮಗಳು ದೂರ ಹೋಗಲು ಶುರು ಮಾಡಿದ್ದಳೋ ಆ ಹುಡುಗ ಹೋಗಿ ಚುಚ್ಚಿದ್ದಾನೆ. ಅದೆಲ್ಲಿ ಲವ್ ಜಿಹಾದ್? ನನಗೆ ಕಾಣಿಸಿಲ್ಲ. ನನ್ನನ್ನು ಬಿಟ್ಟು ಬೇರೆ ಮದುವೆ ಮಾಡಿಕೊಳ್ತಾಳೋ ಏನೋ ಅಂದುಕೊಂಡು, ಹೀಗೆ ಆಗಿದೆ. ನನಗೆ ಇದರ ಪೂರ್ತಿ ಮಾಹಿತಿ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಲವ್ ಜಿಹಾದ್ ಅನ್ನೋದು ಕಾಣುತ್ತಿಲ್ಲ
ಪರಸ್ಪರ ಪ್ರೀತಿ ಮೇಲೆ ಆಗಿರುವ ಘಟನೆ ಇದು. ಲವ್ ಜಿಹಾದ್ ಅನ್ನೋದು ಕಾಣುತ್ತಿಲ್ಲ. ಬಿಜೆಪಿಯವರು ಸ್ವಾಭಾವಿಕವಾಗಿ ಇಂಥಹ ವಿಚಾರದಲ್ಲಿ ಕಾಂಗ್ರೆಸ್ ಅನ್ನು ದೂಷಣೆ ಮಾಡೋದು ಅವರ ಕೆಲಸ. ಅದು ಅಷ್ಟು ಸಮಂಜಸ ಅಲ್ಲ, ನಾವು ಕಾನೂನು ಪ್ರಕಾರ ಕಂಟ್ರೋಲ್ ಮಾಡ್ತಿವಿ. ಎಲ್ಲವನ್ನೂ ರಾಜಕೀಯ ದೃಷ್ಟಿಯಿಂದ ನೋಡೋದು ಈ ಚುನಾವಣೆ ಸಂದರ್ಭದಲ್ಲಿ ಒಳ್ಳೆದಲ್ಲ. ಹಿಂಗೆ ತನಿಖೆ ಮಾಡಿ, ಈ ಸೆಕ್ಷನ್ ಹಾಕಿ ಎಂದು ಅವರು ಹೇಳೋಕೆ ಆಗಲ್ಲ. ಸಾಕ್ಷ್ಯಾಧಾರಗಳ ಆಧಾರದ ಮೇಲೆ ಸೆಕ್ಷನ್ ಹಾಕಲಾಗುತ್ತದೆ ಎಂದು ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.