ಬೆಂಗಳೂರು : ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣ ತಂಪೆರೆದಿದ್ದಾನೆ. ಗುಡುಗು ಸಹಿತ ಭಾರಿ ಮಳೆಗೆ ರೈತರು ಖುಷಿಯಾಗಿದ್ದಾರೆ.
ಹಾವೇರಿ ಜಿಲ್ಲೆ ಹಾನಗಲ್ ಕೃಷಿ ಮಾರುಕಟ್ಟೆ ಬಳಿ ಮಳೆ ಬಂದ ಖುಷಿಗೆ ರೈತ ಸಕತ್ ಸ್ಟೇಪ್ ಹಾಕಿದ್ದಾನೆ. ಜಿಲ್ಲೆಯಲ್ಲಿ ಮೊದಲ ಮಳೆಯಾಗಿದ್ದು, ರೈತ ಫುಲ್ ಖುಷ್ ಯಾಗಿ ರೈತ ಡ್ಯಾನ್ಸ್ ಮಾಡಿರುವ ವಿಡಿಯೋ ವಿಡಿಯೋ ವೈರಲ್ ಆಗಿದೆ.
ಮಂಡ್ಯ, ಮೈಸೂರು, ದಾವಣಗೆರೆ, ವಿಜಯಪುರ, ರಾಯಚೂರು, ಕೊಪ್ಪಳ, ಧಾರವಾಡ, ಗದಗ, ಹಾವೇರಿ, ಹಾಸನ, ಚಾಮರಾಜನಗರ ಸೇರಿದಂತೆ ಹಲವೆಡೆ ಮಳೆಯಾಗಿದೆ. ಬಿಸಿಲಿನ ಬೆಗೆಗೆ ಕಂಗೆಟ್ಟಿದ್ದ ರೈತಾಪಿ ವರ್ಗದ ಮೊಗದಲ್ಲಿ ಮಂದಹಾಸ ಮೂಡಿದೆ.
ಹಾಸನದಲ್ಲಿ ಅರ್ಧಗಂಟೆಗಳ ಕಾಲ ಸುರಿದ ಮಳೆ
ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನಲ್ಲಿ ವರ್ಷದ ಮೊದಲ ಮಳೆಯಾಗಿದೆ. ಬಿರು ಬೇಸಿಗೆಯ ಹೊಡೆತಕ್ಕೆ ಬೋರ್ವೆಲ್ಗಳು ಬತ್ತಿ ಹೋಗಿದ್ದವು. ಜನ ಜಾನುವಾರುಗಳಿಗೆ ಕುಡಿಯುವ ನೀರಿಗೂ ತತ್ವಾರ ಉಂಟಾಗಿತ್ತು. ಅರ್ಧಗಂಟೆಗಳ ಕಾಲ ಸುರಿದ ಮಳೆಯಿಂದ ಅರಕಲಗೂಡು ತಾಲೂಕಿನ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಹೆಗ್ಗಡಿಹಳ್ಳಿ, ಹುಲಿಕಲ್, ಬೆಮ್ಮತ್ತಿ, ರಾಮನಾಥಪುರ, ಕೊಣನೂರು, ಕೇರಳಾಪುರ, ಬೈಚನಹಳ್ಳಿ ಸೇರಿದಂತೆ ತಾಲೂಕಿನ ವಿವಿಧೆಡೆ ಮಳೆಯಾಗಿದೆ.
ಮಲೆನಾಡಿನಲ್ಲಿ ಮಳೆಯ ಸಿಂಚನ
ಮಲೆನಾಡು ಶಿವಮೊಗ್ಗದಲ್ಲಿ ಮಳೆಯ ಸಿಂಚನವಾಗಿದೆ. ಬೇಸಿಗೆಯಿಂದ ಬೆಂಗಾಡಾದಂತಾಗಿದ್ದ ಇಳೆಗೆ ಮಳೆರಾಯ ತಂಪೆರೆದಿದ್ದಾನೆ. ಸಾಗರ ತಾಲೂಕಿನಲ್ಲಿ ಭರ್ಜರಿಯಾಗಿ ಮಳೆ ಸುರಿದಿದ್ದು, ಸುಮಾರು ಒಂದು ಗಂಟೆಗಳ ಕಾಲ ಸಾಗರ ಪಟ್ಟಣ, ಗ್ರಾಮಾಂತರ ಭಾಗದಲ್ಲಿ ಧಾರಾಕಾರ ಮಳೆಯಾಗಿದೆ. ಸಾಗರದಲ್ಲಿ ಹಲವು ರಸ್ತೆಗಳು ಜಲಾವೃತವಾಗಿದ್ದು, ಪಟ್ಟಣದ SPM ರಸ್ತೆಯಲ್ಲಿ ನೀರು ನಿಂತಿವೆ.