ಹುಬ್ಬಳ್ಳಿ : ಪ್ರೀತ್ಸೆ ಪ್ರೀತ್ಸೆ ಎಂದ, ನೋ ಎಂದಿದ್ದಕ್ಕೆ ಕೊಂದೇ ಬಿಟ್ಟ! ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ ಕೊಲೆ ಹಿಂದಿನ ಅಸಲಿ ರಹಸ್ಯ ಬಯಲಾಗಿದೆ.
ಮೃತ ನೇಹಾ ಹಿರೇಮಠ ಪ್ರೀತಿ ನಿರಾಕರಿಸಿದ್ದಕ್ಕೆ ಅನ್ಯಕೋಮಿನ ಯುವಕ ಫಯಾಜ್ 9 ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ಭಯಾನಕ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕೊಲೆಯಾದ ನೇಹಾ ಹಿರೇಮಠ ಬಿವಿಬಿ ಕಾಲೇಜಿನಲ್ಲಿ ಎಂಸಿಎ ಓದುತ್ತಿದ್ದಳು. ಇನ್ನು ಕೊಲೆ ಮಾಡಿರುವ ಆರೋಪಿ ಫಯಾಜ್ ಸಹ ಅದೇ ಕಾಲೇಜಿನಲ್ಲಿ ಬಿಸಿಎ ಓದುತ್ತಿದ್ದ.
ಕಳೆದ ಕೆಲ ದಿನಗಳಿಂದ ಪ್ರೀತ್ಸೆ ಪ್ರೀತ್ಸೆ ಎಂದು ನೇಹಾಳ ಬೆನ್ನುಬಿದ್ದಿದ್ದ. ಆದರೆ, ಫಯಾಜ್ ಪ್ರೇಮ ನಿವೇದನೆಯನ್ನು ನೇಹಾ ಹಿರೇಮಠ ನಿರಾಕರಿಸಿದ್ದಳು. ಇದರಿಂದ ಕೋಪಗೊಂಡು ಆರೋಪಿ ಫಯಾಜ್ ಇಂದು ಕಾಲೇಜ್ ಆವರಣದಲ್ಲೇ ನೇಹಾಳ ಕುತ್ತಿಗೆಯ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
10 ಬಾರಿ ಇರಿದ ಪಾಪಿ, ಸಿಸಿಟಿವಿ ದೃಶ್ಯ ಸೆರೆ
ಆರೋಪಿ ಚಾಕು ಇರಿತ ಮಾಡಿರುವ ದೃಶ್ಯಗಳು ಕಾಲೇಜು ಆವರಣದಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನೇಹಾ ಕಾಲೇಜು ಆವರಣದಲ್ಲಿ ಹೋಗುತ್ತಿರುತ್ತಾಳೆ. ಈ ವೇಳೆ ಎದುರು ಬಂದ ಆರೋಪಿ ಫಯಾಜ್ ಪ್ರೇಮ ನಿವೇದನೆ ಒಪ್ಪಿಕೋ ಎಂದಿದ್ದಾನೆ. ಅದಕ್ಕೆ ನೇಹಾ ಇಲ್ಲ ಎಂದಿದ್ದಾಳೆ. ಆಗ ಆರೋಪಿ ಚಾಕುವಿನಿಂದ ಎರಡು ಬಾರಿ ಇರಿದಿದ್ದಾನೆ. ಚಾಕು ಹಾಕುತ್ತಿದ್ದಂತೆ ನೇಹಾ ನೆಲಕ್ಕೆ ಕುಸಿದು ಬಿದ್ದಿದ್ದಾಳೆ. ಮತ್ತೆ 10 ಬಾರಿ ನೇಹಾಗೆ ಚಾಕುವಿನಿಂದ ಚುಚ್ಚಿ ಆರೋಪಿ ಪರಾರಿಯಾಗಿದ್ದಾನೆ.