ಹಾಸನ : ಕೆ.ಎಸ್. ಈಶ್ವರಪ್ಪ ಅವರು ಮಂತ್ರಿಯಾಗಿ ಶಿವಮೊಗ್ಗಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ? ಉಪಮುಖ್ಯಮಂತ್ರಿಯಾಗಿ ಶಿವಮೊಗ್ಗ ಜಿಲ್ಲೆಗೆ ಅವರ ಕೊಡುಗೆ ಏನು? ಎಂದು ಈಶ್ವರಪ್ಪ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದರು.
ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪನವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುತ್ತೇವೆ. ಕ್ಷೇತ್ರದ ಮತದಾರರು ಕೂಡ ಕ್ರಮ ಕೈಗೊಳ್ತಾರೆ ಎಂದು ಕುಟುಕಿದರು.
ಈಶ್ವರಪ್ಪನವರು ಎಷ್ಟೆಷ್ಟು ಮಾತನಾಡ್ತಾರೆ, ಅದರ ದುಪ್ಪಟ್ಟು ಮತಗಳು ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರಿಗೆ ಬೀಳುತ್ತವೆ. ರಾಘವೇಂದ್ರ ಅವರು ಒಬ್ಬ ಜನಪ್ರಿಯ ಸಂಸದರಿದ್ದಾರೆ. ಈ ರೀತಿಯ ಪುಕ್ಕಟ್ಟೆ ಮಾತುಗಳನ್ನು ಜನರು ಗಮನಿಸುತ್ತಾರೆ ಎಂದು ಚಾಟಿ ಬೀಸಿದರು.
ಜನ ಅವರಿಗೆ ಏನು ಬುದ್ದಿ ಕಲಿಸಬೇಕು, ಕಲಿಸ್ತಾರೆ
ರಾಘವೇಂದ್ರ ಅವರು ಸಂಸದರಾಗಿ ಯಾವ ರೀತಿ ಅಭಿವೃದ್ಧಿ ಮಾಡಿದ್ದಾರೆ. ಯಡಿಯೂರಪ್ಪ ಅವರು ಜಿಲ್ಲೆಗೆ, ರಾಜ್ಯಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಮನೆ ಮನೆಯಲ್ಲೂ ಮಾತನಾಡುತ್ತಾರೆ. ಅವರಿಂದ ಕಲಿಯಬೇಕಾದ ಅವಶ್ಯಕತೆ ಇಲ್ಲ. ಇವತ್ತು ಸಂಸದರಾಗಿರುವ ರಾಘವೇಂದ್ರ ಅವರು ಎರಡು ಲಕ್ಷಕ್ಕಿಂತ ಹೆಚ್ಚು ಮತಗಳಿಂದ ಗೆದ್ದು ಬರ್ತಾರೆ. ಜನ ಅವರಿಗೆ ಏನು ಬುದ್ದಿ ಕಲಿಸಬೇಕು, ಕಲಿಸುತ್ತಾರೆ ಎಂದು ಬಿ.ವೈ. ವಿಜಯೇಂದ್ರ ಎಚ್ಚರಿಕೆ ನೀಡಿದರು.
“ದೇಶ ಗೆಲ್ಲಿಸಲು
ಮತ್ತೊಮ್ಮೆ ಮೋದಿ ಸರ್ಕಾರ”ಹಾಸನ ಲೋಕಸಭಾ ಕ್ಷೇತ್ರದ ಹೊಳೆನರಸೀಪುರದಲ್ಲಿಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ನೆರವೇರಿಸಿದ ನಂತರ ಆಯೋಜಿಸಿದ್ದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಾಯಿತು. ರಾಜ್ಯ ಹಾಗೂ ರಾಷ್ಟ್ರದ ಹಿತ ಹಾಗೂ ಸಮಗ್ರ ಅಭಿವೃದ್ಧಿಗಾಗಿ ಮತ್ತೊಮ್ಮೆ ಮೋದಿ ಸರ್ಕಾರ… pic.twitter.com/BJHBlrJYry
— Vijayendra Yediyurappa (Modi Ka Parivar) (@BYVijayendra) April 15, 2024