ಮೈಸೂರು : ನರೇಂದ್ರ ಮೋದಿ ದೇಶದ ಯಶಸ್ವಿ ಪ್ರಧಾನಿ. ದೇಶಕ್ಕೆ ಗೌರವ ತಂದುಕೊಟ್ಟ ಪ್ರಧಾನಿ ಇದ್ದರೆ ನರೇಂದ್ರ ಮೋದಿ ಎಂದು ಮೋದಿಯನ್ನು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೊಗಳಿದರು.
ಮೈಸೂರಿನಲ್ಲಿ ನಡೆದ ವಿಜಯ ಸಂಕಲ್ಪ ಸಮಾವೇಶದಲ್ಲಿ ಭಾಷಣ ಮಾಡಿದ ಅವರು, ನನಗೆ ಮಂಡಿ ನೋವು ಇದೆ. ಎದ್ದು ನಿಂತು ಗೌರವ ಸಲ್ಲಿಸಲು ಸಾಧ್ಯವಾಗಲಿಲ್ಲ, ಕ್ಷಮೆ ಕೋರುತ್ತೇನೆ ಎಂದು ತಿಳಿಸಿದರು.
ಅಯ್ಯಯ್ಯೋ I.N.D.I.A ಅಂತೆ. ಯಾರು ಈ ದೇಶ ನಡೆಸುತ್ತಿದ್ದಾರೋ? ದೇಶವನ್ನು ಮುನ್ನಡೆಸಿದವರು ಯಾರಾದರೂ ಇದ್ದರೆ ಪಕ್ಕದಲ್ಲೇ ಕುಳಿತಿದ್ದಾರೆ ನೋಡಿ. ನಾನು ಕೈಮುಗಿದು ಪ್ರಾರ್ಥನೆ ಮಾಡುತ್ತೇನೆ. ರಾಷ್ಟ್ರವನ್ನು ಬಲಯುತವಾಗಿ ಬೆಳೆಸುವ ಒಂದೇ ಶಕ್ತಿ ಪ್ರಧಾನಿ ನರೇಂದ್ರ ಮೋದಿ. ಇಂಥವರು ಇಂಡಿಯಾ ಒಕ್ಕೂಟದಲ್ಲಿ ನನ್ನ ಕಣ್ಣಿಗೆ ಯಾರೂ ಕಾಣುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ನೀವು ಕೇವಲ 6 ಕೋಟಿಯ ಮುಖ್ಯಮಂತ್ರಿ
ಈ ತಲೆಯಲ್ಲಿ ಬುದ್ದಿ ಇಲ್ಲದೇ ಕುಮಾರಸ್ವಾಮಿಗೆ ಮೋದಿ ಜತೆ ಹೋಗಲು ಹೇಳಲಿಲ್ಲ. ನೀನು ಹೋಗು, ಮೋದಿ ಜತೆ ಇರು ಅಂತ ಹೇಳಿದ್ದೇನೆ. ನನ್ನ ಪಕ್ಕದಲ್ಲಿ ಯದುವೀರ್ ಇದ್ದಾರೆ. ನಾನು ಮಹಾರಾಜರ ಕೊಡುಗೆಗಳನ್ನು ವಿವರಿಸಲ್ಲ. ಈ ರಾಜ್ಯದಲ್ಲಿ ಇಬ್ಬರು ಮಹನೀಯರು ಇದ್ದಾರೆ. ಪುಣ್ಯಾತ್ಮರಿಗೆ ನಮೋ ನಮಃ. ಮೋದಿ ಅವರ ಬಗ್ಗೆ ಎಷ್ಟು ಲಘುವಾಗಿ ಒಬ್ಬ ರಾಜ್ಯದ ಮುಖ್ಯಮಂತ್ರಿ ಮಾತನಾಡುತ್ತಿದ್ದಾರೆ. ಇದೆಲ್ಲವನ್ನೂ ನಾನು ಗಮನಿಸುತ್ತಿದ್ದೇನೆ. ನೀವು ಕೇವಲ ಆರು ಕೋಟಿಯ ಮುಖ್ಯಮಂತ್ರಿ. 150 ಕೋಟಿಯ ಪ್ರಧಾನಿ ಬಗ್ಗೆ ಮಾತನಾಡುತ್ತೀರಿ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.
24 ಎನ್ಡಿಎ ಅಭ್ಯರ್ಥಿಗಳು ಗೆಲ್ಲಬೇಕು
ನನಗೆ 28 ಸೀಟು ಗೆಲ್ಲಬೇಕು. ತುಮಕೂರು, ಬಿಜಾಪುರ ಸೇರಿದಂತೆ ರಾಜ್ಯದ ಎಲ್ಲ ಕಡೆ ಗೆಲ್ಲಬೇಕು. ನೀವು ಎಲ್ಲಿದ್ದೀರಿ ಅಲ್ಲಿಗೆ ಬರುತ್ತೇನೆ. ಈ ರಾಜ್ಯದಿಂದ 24 ಸ್ಥಾನಗಳನ್ನು ನಾವು ನಿಮ್ಮ ಬಳಿಗೆ ಬರುತ್ತೇವೆ. ಮೂರು ಜೆಡಿಎಸ್ ಅಲ್ಲ, 24 ಎನ್ಡಿಎ ಅಭ್ಯರ್ಥಿಗಳು ಗೆಲ್ಲಬೇಕು. ಯಡಿಯೂರಪ್ಪ ಅವರೇ ನಾವು ಕೆಲಸ ಮಾಡುತ್ತೇವೆ. ನಾಲ್ಕು ಕ್ಷೇತ್ರಕ್ಕೆ ಸೀಮಿತ ಅಲ್ಲ ಎಂದು ಹೆಚ್.ಡಿ. ದೇವೇಗೌಡ ಹೇಳಿದರು.