ಶಿವಮೊಗ್ಗ : ಬಿಜೆಪಿಯ ಒಂದೇ ಒಂದು ವೋಟು ಬೇರೆ ಕಡೆ ಹೋಗುವುದಿಲ್ಲ. ಹಿಂದುತ್ವ ಮತ್ತು ಮೋದಿ ಹೆಸರಿನಲ್ಲಿ ಎಲ್ಲರು ವೋಟು ಕೇಳಲು ಆಗುವುದಿಲ್ಲ. ಮತದಾರರು ಪ್ರಜ್ಞಾವಂತರಿದ್ದಾರೆ ಎಂದು ಸಂಸದ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಹೇಳಿದರು.
ಶಿವಮೊಗ್ಗದಲ್ಲಿ ಮಾತನಾಡಿ, ಹಾದಿಬೀದಿಲಿ ದಾಖಲೆ ಇಲ್ಲದೆ ಸುಳ್ಳು ಸೃಷ್ಟಿ ಮಾಡಿ, ಮಾತನಾಡುವವರಿಗೆ ನಾನು ಪ್ರತಿಕ್ರಿಯೆ ವ್ಯಕ್ತಪಡಿಸುವುದಿಲ್ಲ. ನಾನು ಮಾಡಿದ ಅಭಿವೃದ್ಧಿ ಕಾರ್ಯ ನನ್ನ ಬೆನ್ನ ಹಿಂದೆ ನಿಂತಿದೆ ಎಂದು ಕೆ.ಎಸ್. ಈಶ್ವರಪ್ಪಗೆ ಟಾಂಗ್ ಕೊಟ್ಟರು.
ಸಾಗರದಲ್ಲಿ ನಡೆದ ಈಡಿಗರ ಸಮಾವೇಶ ಮತ್ತು ಶಿವಮೊಗ್ಗದಲ್ಲಿ ಫ್ರೀಡಂ ಪಾರ್ಕ್ನಲ್ಲಿ ನಡೆದ ಪ್ರಧಾನಿ ಸಮಾವೇಶ ವಿರೋಧಿಗಳಿಗೆ ಉತ್ತರ ನೀಡಿದೆ. ಬಾಯಲ್ಲಿ ಸುಳ್ಳು ಹೇಳಿ ದೈಹಿಕವಾಗಿ ಜಗಳವಾಡುವ ವ್ಯವಸ್ಥೆ ಪ್ರಜಾಪ್ರಭುತ್ವದಲ್ಲಿ ಇಲ್ಲ. ಮೋದಿಜೀಗಿಂತ ರಾಷ್ಟ್ರ ಭಕ್ತರು ಬೇರೆ ಬೇಕೆ ಎಂದು ಪ್ರಶ್ನಿಸಿದರು.
ಮೋದಿ ಸರ್ಕಾರ ಎಡೆಮುರಿ ಕಟ್ಟಿದೆ
ಮೋದಿ ಆಡಳಿತದಲ್ಲಿ ದೇಶ ವಿರೋಧಿ ಚಟುವಟಿಕೆ ಮಾಡುವವರಿಗೆ ತಕ್ಕ ಉತ್ತರ ನೀಡಲಾಗಿದೆ. ನಮ್ಮ ಮನೆಯ ಪಕ್ಕದ ತೀರ್ಥಹಳ್ಳಿಯಲ್ಲಿಯೇ ಭಯೋತ್ಪಾದಕರು ಬಾಂಬ್ ತಯಾರಿಸಿದ್ದರು. ಅವರನ್ನು ಮೋದಿ ಸರ್ಕಾರ ಎಡೆಮುರಿ ಕಟ್ಟಿದೆ. ಕೆಲವರು ಹಗುರವಾಗಿ ನಮ್ಮ ಕುಟುಂಬದ ಬಗ್ಗೆ ಮತ್ತು ಮೋದಿ ಸರ್ಕಾರದ ಬಗ್ಗೆ ಮಾತನಾಡುತ್ತಿದ್ದು, ಅವರಿಗೆ ಮತದಾರ ಅವರಿಗೆ ತಕ್ಕ ಉತ್ತರ ನೀಡುತ್ತಾರೆ ಎಂದು ತಿಳಿಸಿದರು.
ಏ.18ರಂದು ನಾಮಪತ್ರ ಸಲ್ಲಿಸುತ್ತೇನೆ
ಚುನಾವಣಾ ಅಖಾಡಾ ರೆಡಿಯಾಗಿದೆ. ಏಪ್ರಲ್ 18ರಂದು ಬೆಳಗ್ಗೆ 9ಗಂಟೆಗೆ ರಾಮಣ್ಣಶ್ರೇಷ್ಠಿ ಪಾರ್ಕ್ನಿಂದ ಪೂಜೆ ಸಲ್ಲಿಸಿ, ಬೃಹತ್ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸುತ್ತೇನೆ. ಗ್ರಾಮಾಂತರ ಕ್ಷೇತ್ರದಲ್ಲಿ ನಿನ್ನೆ ನಡೆದ ಸಭೆ ಯಶಸ್ವಿಯಾಗಿದೆ. ನಾಳೆ ಸಂಜೆ ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ನಲ್ಲಿ ಶಿವಮೊಗ್ಗ ಮೂಲದ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳ ಬೃಹತ್ ಸಮಾವೇಶ ನಡೆಯಲಿದೆ ಎಂದು ಬಿ.ವೈ. ರಾಘವೇಂದ್ರ ಮಾಹಿತಿ ನೀಡಿದರು.