ಹುಬ್ಬಳ್ಳಿ : ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್ ಅವರ ಮಗ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಶಿವರಾಂ ಹೆಬ್ಬಾರ್ ಬಿಜೆಪಿಗೆ ದ್ರೋಹ ಮಾಡಿದ್ದಾರೆ. ಅವರ ಮಗ ಕಾಂಗ್ರೆಸ್ ಸೇರಿರೋದು ಆಶ್ಚರ್ಯ ಸಂಗತಿ ಏನಲ್ಲ ಎಂದು ಕುಟುಕಿದ್ದಾರೆ.
ದಿಂಗಾಲೇಶ್ವರ ಶ್ರೀಗಳ ಬಗ್ಗೆ ನನಗೆ ಅಪಾರ ಗೌರವಿದೆ. ಅವರ ಹೇಳಿಕೆಗೆ ಏನನ್ನು ಪ್ರತಿಕ್ರಿಯಿಸಲ್ಲ. ಅವರ ಪ್ರತಿಯೊಂದು ಹೇಳಿಕೆಯನ್ನು ಆಶೀರ್ವಾದ ಅಂತ ತಿಳಿಯುತ್ತೇನೆ. ಜನ ಪ್ರಭುದ್ದರಿದ್ದು, ಜನರ ಆಶೀರ್ವಾದ ನನಗೆ ಸಿಕ್ಕೇ ಸಿಗುತ್ತೆದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ನನ್ನನ್ನು ಅಖಾಡಕ್ಕೆ ಇಳಿಸಿದೆ
ಕಾಂಗ್ರೆಸ್ ನಿಂದ ದಿಂಗಾಲೇಶ್ವರ ಶ್ರೀಗಳಿಗೆ ಬಾಹ್ಯ ಬೆಂಬಲ ಚರ್ಚೆ ವಿಚಾರ ಕುರಿತು ಮಾತನಾಡಿ, ಕಾಂಗ್ರೆಸ್ನವರು ತಮ್ಮ ಕ್ಯಾಂಡಿಡೇಟ್ ಹಾಕಿದ್ದಾರೆ. ಬಿಜೆಪಿ ನನ್ನನ್ನು ಅಖಾಡಕ್ಕೆ ಇಳಿಸಿದೆ. ಆದರೆ, ಅದಕ್ಕೆ ನಾನು ಉತ್ತರ ಕೊಡಲ್ಲ. ಅವರು ನಮ್ಮ ಪಕ್ಷದವರು ಅಲ್ಲ, ನನಗೂ ಸಂಬಂಧವಿಲ್ಲ. ಆದಾಗ ನಾನು ವಿಚಾರ ಮಾಡಿ ಪ್ರತಿಕ್ರಿಯೆ ನೀಡುತ್ತೇನೆ ಎಂದು ಹೇಳಿದ್ದಾರೆ.
ಕಾನೂನಿನ ಬಗ್ಗೆ ಕಾಂಗ್ರೆಸ್ನವರಿಗೆ ನಂಬಿಕೆ ಇಲ್ಲ
ವಿನಯ್ ಕುಲಕರ್ಣಿ ಜೈಲಿಗೆ ಹೋಗಲಿಕ್ಕೆ ಪ್ರಲ್ಹಾದ್ ಜೋಶಿ ಕಾರಣ ಎಂಬ ಆರೋಪದ ಬಗ್ಗೆ ಮಾತನಾಡಿ. ವಿನಯ್ ಕುಲಕರ್ಣಿ ಹತಾಶರಾಗಿ ಮಾತನಾಡಿದ್ದಾರೆ. ಇದರ ಬಗ್ಗೆ ನಾನೇನು ಪ್ರತಿಕ್ರಿಯೆ ನೀಡಲ್ಲ. ಈ ದೇಶದ ಕಾನೂನಿನ ಬಗ್ಗೆ, ನ್ಯಾಯಾಲಯಗಳ ಬಗ್ಗೆ ಕಾಂಗ್ರೆಸ್ನವರಿಗೆ ನಂಬಿಕೆ ಇಲ್ಲ ಎಂದು ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.