ಬೆಂಗಳೂರು : ತುಮಕೂರು ಜಿಲ್ಲೆಯ ಕುಣಿಗಲ್ ಹಿರೇಮಠಾಧ್ಯಕ್ಷ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ (63) ಲಿಂಗೈಕ್ಯರಾಗಿದ್ದಾರೆ.
ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀಗಳು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಇಹಲೋಕ ತ್ಯಜಿಸಿದ್ದಾರೆ.
ಶ್ರೀಗಳು ಅಪಾರ ಸದ್ಭಕ್ತ ವರ್ಗವನ್ನು ಅಗಲಿದ್ದಾರೆ. ಕೊತ್ತಗೆರೆ ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಶ್ರೀಗಳ ಅಂತಿಮ ಸಂಸ್ಕಾರ ನಡೆಯಲಿದೆ. ಶ್ರೀಗಳ ಅಗಲಿಕೆಗೆ ಗಣ್ಯರು ಹಾಗೂ ಭಕ್ತರು ಸಂತಾಪ ಸೂಚಿಸಿದ್ದಾರೆ. ಕುಣಿಗಲ್ ಶಾಸಕ ಡಾ.ಹೆಚ್.ಡಿ. ರಂಗನಾಥ್, ಮಾಜಿ ಸಚಿವ ಡಿ. ನಾಗರಾಜಯ್ಯ, ತುಮುಲ್ ನಿರ್ದೇಶಕ ಡಿ. ಕೃಷ್ಣಕುಮಾರ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹೆಚ್.ಡಿ. ರಾಜೇಶ್ಗೌಡ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಶಿವಕುಮಾರ ಸ್ವಾಮೀಜಿಗಳ ಸೇವೆ
ಶಿವಾಚಾರ್ಯ ಶ್ರೀಗಳು 70ರ ದಶಕದಲ್ಲಿ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಅಭ್ಯಾಸ ಮಾಡಿದ್ದರು. ಈ ವೇಳೆ ನಡೆದಾಡುವ ದೇವರು ಲಿಂ. ಶಿವಕುಮಾರ ಸ್ವಾಮೀಜಿಗಳ ಸೇವೆಯನ್ನು ಮಾಡಿದ್ದರು. ನಂತರ ಕುಣಿಗಲ್ ತಾಲೂಕಿನ ಅಂಕನಹಳ್ಳಿಯ ಶ್ರೀ ಪಿರಂಗಿಮಠದ ಸಂಸ್ಕೃತ ಪಾಠ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ನಿವೃತ್ತಿ ಪಡೆದ ಬಳಿಕ ಕುಣಿಗಲ್ ತಾಲೂಕಿನ ಆಲ್ಕರೆ ಸಿದ್ಧಗಂಗಾ ಶಾಖಾ ಮಠದ ಉಸ್ತುವಾರಿ ವಹಿಸಿಕೊಂಡರು. ಶ್ರೀಗಳು ಅತ್ಯಂತ ಸರಳ ಜೀವಿಗಳು, ಕಾಯಕಯೋಗಿಗಳು ಆಗಿದ್ದರು.