ಬೆಂಗಳೂರು : ಬೀದಿ ಬದಿ ಹೋಟೆಲ್ಗಳನ್ನು ಮುಚ್ಚಿಸುವಂತೆ ಆಗ್ರಹಿಸಿ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ವತಿಯಿಂದ ಆರೋಗ್ಯ ಇಲಾಖೆ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಮನವಿ ಮಾಡಿದ್ದೇವೆ ಎಂದು ಸಂಘದ ಅಧ್ಯಕ್ಷ ಪಿ.ಸಿ ರಾವ್ ಅವರು ತಿಳಿಸಿದ್ದಾರೆ.
ಈ ಕುರಿತು ಮಾದ್ಯಮ ಪ್ರತಿಕ್ರಿಯೆ ನೀಡಿದ ಅವರು, ಇತ್ತೀಚೆಗೆ ರಾಜ್ಯದಲ್ಲಿ ಬೇಸಿಗೆಯ ತೀವ್ರತೆಯು ಹೆಚ್ಚಾಗುತ್ತಿದೆ ಜೊತೆಗೆ ಬೀದಿ ಬದಿ ಹೋಟೆಲ್ಗಲ್ಲಿ ತಯಾರಿಸಿ ಮಾರಾಟ ಮಾಡುವ ಆಹಾರಗಳು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ, ನಗರದಲ್ಲಿ ಸರಿ ಸುಮಾರು 30 ಸಾವಿರಕ್ಕಿಂತ ಹೆಚ್ಚು ಅನಧಿಕೃತ ಬೀದಿ ಬದಿ ಹೋಟೆಲ್ಗಳಿದ್ದು ಅವುಗಳನ್ನು ಕೂಡಲೆ ಮುಚ್ಚಿಸುವಂತೆ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ 10ಕ್ಕೆ ಏರಿಕೆಯಾದ ಕಾಲರಾ ಕೇಸ್; ಬೆಂಗಳೂರಿನಲ್ಲಿಯೇ 6 ಪ್ರಕರಣಗಳು!
ಬೀದಿ ಬದಿಯಲ್ಲಿ ಸಿಲಿಂಡರ್ಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುವುದು ಆರೋಗ್ಯದ ದೃಷ್ಟಿಯಿಂದ ಸಮಂಜಸವಲ್ಲ, ಇದರ ಜೊತೆಗೆ ಅವರು ಆಹಾರ ತಯಾರಿಸುವ ಸ್ಥಳ, ಉಪಯೋಗಿಸುವ ವಸ್ತುಗಳು ಸಹ ಆರೋಗ್ಯಕ್ಕೆ ಹಾನಿಕರ, ಯಾವುದೇ ಕಾರಣಕ್ಕು ಸಾರ್ವಜನಿಕರ ಆರೋಗ್ಯ ಕಾಪಾಡುವುದು ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಯವರ ಆದ್ಯ ಕರ್ತವ್ಯವಾಗಿದೆ ಆದ್ದರಿಂದ ಈ ಕೂಡಲೇ ಬೀದಿ ಬದಿ ಹೋಟೆಲ್ಗಳನ್ನು ತೆರವುಗೊಳಿಸಬೇಕು.
ಅವರಿಗೆ ಪರ್ಯಾಯವಾಗಿ ಬೇರೆ ವ್ಯಾಪಾರಕ್ಕೆ ಪ್ರೋತ್ಸಾವ ನೀಡಬೇಕು, ಹೋಟೆಲ್ ಉದ್ಯಮವನ್ನು ಬಿಟ್ಟು ನೀರು, ಹಣ್ಣು ಹಂಪಲು, ತರಕಾರಿಗಳು, ಬಟ್ಟೆ ವ್ಯಾಪಾರ ಮುಂತಾದವುಗಳನ್ನು ತೆರೆಯಲು ಪ್ರೋತ್ಸಾಹಿಸಬೇಕು ಎಂದು ಇಲಾಖೆಗೆ ಬರೆದಿರುವ ಪತ್ರದಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ.