ದಾವಣಗೆರೆ : ಡಿ.ಕೆ. ಸುರೇಶ್ ಠೇವಣಿ ಕಳೆದುಕೊಳ್ಳಲಿದ್ದಾರೆ ಎಂದು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಡಾ. ರಾಧಾ ಮೋಹನ್ ದಾಸ್ ಅಗರ್ವಾಲ್ ಭವಿಷ್ಯ ನುಡಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತಕ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವುದು ನಿಶ್ಚಿತ ಎಂದು ಹೇಳಿದರು.
ಬರೋಬ್ಬರಿ 6 ಲಕ್ಷ ಮತಗಳ ಅಂತರದಲ್ಲಿ ನಮ್ಮ ಅಭ್ಯರ್ಥಿ ಡಾ. ಮಂಜುನಾಥ್ ಗೆಲುವು ಸಾಧಿಸಲಿದ್ದಾರೆ. ಗ್ಯಾರಂಟಿಯಾಗಿ ಹೇಳುತ್ತೇನೆ ಠೇವಣಿ ಜಪ್ತಿ ಆಗುತ್ತದೆ. ಡಿಕೆ ಬ್ರದರ್ಸ್ ಕಂತೆ ಕಂತೆ ಹಣ ಚೆಲ್ಲಿ ಗೆಲ್ಲುತ್ತೇನೆ ಎಂಬ ಭ್ರಮೆಯಲ್ಲಿದ್ದಾರೆ. ನಮ್ಮ ಅಭ್ಯರ್ಥಿ ಮಂಜುನಾಥ್ ಒಂದು ಪೈಸೆ ಖರ್ಚು ಮಾಡದೇ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅವ್ರು ಮೋದಿಯವರ ಜೊತೆ ಇದ್ದಾರೆ
ಶಿವಮೊಗ್ಗದಲ್ಲಿ ಕೆ.ಎಸ್. ಈಶ್ವರಪ್ಪ ಬಂಡಾಯ ಸ್ಪರ್ಧೆ ವಿಚಾರವಾಗಿ ಮಾತನಾಡಿ, ಕೆ.ಎಸ್. ಈಶ್ವರಪ್ಪ ಅವರ ಜೊತೆ ಮಾತನಾಡಿದ್ದೇನೆ. ಈಶ್ವರಪ್ಪ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಇದ್ದಾರೆ. ಈಶ್ವರಪ್ಪ ಜೊತೆ ಮತ್ತೆ ಮಾತುಕತೆ ಮಾಡುತ್ತೇವೆ ಎಂದು ಹೇಳಿದರು.
ಈಶ್ವರಪ್ಪ ಬಿಜೆಪಿ ಪರ ಪ್ರಚಾರ ಮಾಡ್ತಿದ್ದಾರೆ
ಈಶ್ವರಪ್ಪ ಸ್ಪರ್ಧೆಯಿಂದ ಬಿ.ವೈ. ರಾಘವೇಂದ್ರ ಗೆಲುವಿಗೆ ಹಿನ್ನಡೆಯಾಗುತ್ತಾ? ಎಂಬ ಪ್ರಶ್ನೆಗೆ, ಈಶ್ವರಪ್ಪ ಒಂದು ರೀತಿಯಲ್ಲಿ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ. ಈಶ್ವರಪ್ಪ ಬಿಜೆಪಿ ಸಿದ್ದಾಂತ ಮೋದಿಯವರ ಬಗ್ಗೆಯೇ ಮಾತನಾಡುತ್ತಾರೆ. ಹೀಗಾಗಿ, ಅಧಿಕೃತ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರಿಗೆ ಆ ಎಲ್ಲಾ ವೋಟ್ಗಳು ಬೀಳುತ್ತವೆ ಎಂದು ರಾಧಾ ಮೋಹನ್ ಅಗರವಾಲ್ ತಿಳಿಸಿದರು.