ಬೆಂಗಳೂರು : ನಮ್ಮದು ಸ್ಟ್ರಾಟರ್ಜಿ ಏನಿಲ್ಲ. ಚುನಾವಣೆ ಗೆಲ್ಲಬೇಕು ಅಷ್ಟೆ. ಡಿಕೆಶಿ ನೋಟು ಡಾಕ್ಟ್ರಿಗೆ ವೋಟು ಅಷ್ಟೇ. ಡಿ.ಕೆ. ಶಿವಕುಮಾರ್ ಅವರ ನೋಟು ಪಡೆದು, ಡಾಕ್ಟರ್ಗೆ ಮತ ನೀಡಿ ಎಂದು ಮತದಾರರಿಗೆ ಮನವಿ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕುಟುಕಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಅಭ್ಯರ್ಥಿ ಡಾ. ಮಂಜುನಾಥ್ ಅವರು ಒಂದು ವಿದ್ಯುತ್ ಸಂಚಲನ ಮಾಡಿದ್ದಾರೆ. ಜನರಲ್ಲೂ ಸಹ ಸ್ವಯಂ ಪ್ರೇರಣೆಯಿಂದ ಒಲವಿದೆ. ನರೇಂದ್ರ ಮೋದಿಯವರ ಕೈ ಬಲಪಡಿಸಬೇಕು ಅಂತ ಜನರಲ್ಲಿ ಭಾವನೆ ಇದೆ ಎಂದು ಹೇಳಿದರು.
ಚನ್ನಪಟ್ಟಣ ಆಪರೇಷನ್ ಹಸ್ತ ವಿಚಾರವಾಗಿ ಮಾತನಾಡಿ, ಅವರು ದುಡ್ಡಿನ ಕಡೆ ಹೋಗಿದ್ದಾರೆ ಅಷ್ಟೆ. ನಮ್ಮಿಂದ ಗೆದ್ದವರನ್ನ ಕೊಂಡ ತಕ್ಷಣ ಚುನಾವಣೆಯಲ್ಲಿ ಗೆಲ್ಲಬಹುದು ಅಂದಕೊಂಡಿದ್ದಾರೆ. ಒಬ್ಬೊಬ್ಬರಿಗೆ 15 ಲಕ್ಷ ಕೊಟ್ಟಿದ್ದಾರಂತೆ. ದುಡ್ಡಿನ ಮದ ಇಳಿಸೋದಕ್ಕೆನೇ ಡಾಕ್ಟ್ರರನ್ನ ಅಂಕುಶವಾಗಿ ಇಟ್ಟುಕೊಂಡಿದ್ದೇವೆ ಎಂದು ಡಿಕೆ ಬ್ರದರ್ಸ್ಗೆ ಚಾಟಿ ಬೀಸಿದರು.
ಅಣ್ಣ ತಮ್ಮ ದುಡ್ಡು ಕೊಟ್ಟು ಕಾಲಿಗೆ ಬಿಳ್ತಿದ್ದಾರೆ
ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಹಾಗೂ ಡಾಕ್ಟ್ರರ ಹೆಸರು ಅಷ್ಟೆ. ಅವರು ದುಡ್ಡು ಕೊಟ್ಟು ನಾಯಕರನ್ನು ಕೊಂಡಿಕೊಂಡಿದ್ದಾರೆ. ಇಂಥ ದರಿದ್ರನಾ ನೋಡಿರಲಿಲ್ಲ. 50 ವೋಟು ಇದೆ ಅಂದ್ರೆ, ದುಡ್ಡು ಕೊಟ್ಟು ಕಾಲಿಗೆ ಬಿಳ್ತಿದ್ದಾರೆ ಅಣ್ಣ ತಮ್ಮ ಎಂದು ವಾಗ್ದಾಳಿ ನಡೆಸಿದರು.
ಜನರೇ ಅವರ ಸಾಲ ತೀರಿಸಬೇಕಲ್ವಾ?
ಕಾಂಗ್ರೆಸ್ ಪ್ರಣಾಳಿಕೆ ಘೋಷಣೆ ವಿಚಾರವಾಗಿ ಮಾತನಾಡಿ, ನುಡಿದಂತೆ ನಡೆದಿದ್ದೇವೆ ಅಂತ ಹೇಳ್ತಾರಲ್ಲ. ಯಾರ ಹಣ ಅದು? ಯಾರ ಮೇಲೆ ತೆರಿಗೆ ಹಾಕ್ತಾ ಇದ್ದಾರೆ? ಉಚಿತ ಕೊಡ್ತೀವಿ ಅಂತರಲಾ, ಸಾಲ ಎಷ್ಟು ಮಾಡಿದ್ದಾರೆ ಇವರು? ಜನರೇ ಅವರ ಸಾಲ ತೀರಿಸಬೇಕಲ್ವಾ? ಮೊದಲು ಕೂಪನ್ ಕೊಟ್ರು ಇಲ್ಲಿ ಐದು ಸಾವಿರದ್ದು, ಈಗ ಜನರ ದುಡ್ಡು ಫ್ರೀಬೀಸ್ ಅಂತಾರೆ. ಬೆಂಗಳೂರಿನಲ್ಲಿ ಜನರಿಗೆ ನೀರಿಲ್ಲ ಎಂದು ಛೇಡಿಸಿದರು.
ಸುಮಲತಾ ಅವರು ಪ್ರಚಾರಕ್ಕೆ ಬರ್ತಾರೆ
ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರು ಮೊನ್ನೆಯೇ ತೀರ್ಮಾನ ಕೈಗೊಂಡಿದ್ದಾರೆ. ಅವರು ಸಮಯ ನೋಡಿ ನನ್ನ ಪರ ಪ್ರಚಾರದಲ್ಲಿ ಭಾಗಿಯಾಗ್ತಾರೆ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.