ತುಮಕೂರು : ಬರ ಪರಿಹಾರಕ್ಕೆ ಹಣ ಕೊಡಿ ಅಂತ ಹೇಳಿದ್ರೆ ಕೊಟ್ಟಿಲ್ಲ ನೀವು. ಯಾವ ಮುಖ ಇಟ್ಕೊಂಡು ವೋಟು ಕೇಳೋಕೆ ಬರುತ್ತೀರಿ..? ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಕಿಡಿಕಾರಿದರು.
ತುಮಕೂರಿನಲ್ಲಿ ಮಾತನಾಡಿದ ಅವರು, 25 ಸಂಸದರನ್ನು ನಮ್ಮ ರಾಜ್ಯದಲ್ಲಿ ಗೆಲ್ಲಿಸಿದ್ರೂ ಒಂದೇ ಒಂದು ಯೋಜನೆಗೆ ಹಣ ಕೊಟ್ಟಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಒಂದೇ ಒಂದು ರೂಪಾಯಿ ಹಣ ಕೊಟ್ಟಿಲ್ಲ. ಆದ್ರೆ, ಅಮಿತ್ ಶಾ ಮೊನ್ನೆ ಬಂದು 18,000 ಕೋಟಿ ಕೊಟ್ಟಿದ್ದೀವಿ ಅಂತ ಹೇಳ್ತಾರೆ. ಯಾಕ್ರೀ ಸುಳ್ಳು ಹೇಳ್ತಿರಿ, ಸುಳ್ಳು ಹುಟ್ಟಿರೋದೇ ನಿಮ್ಮಿಂದ ಎಂದು ಕುಟುಕಿದರು.
ನಾವು ಇಂದು ಒಂದು ಧರ್ಮಯುದ್ಧಕ್ಕೆ ಸಜ್ಜಾಗಿ ನಿಂತಿದ್ದೇವೆ. ಒಂದು ಕಡೆ ಸತ್ಯ ನಿಂತಿದೆ, ಅದು ಕಾಂಗ್ರೆಸ್. ಇನ್ನೊಂದು ಕಡೆ ಅಸತ್ಯ ನಿಂತಿದೆ. ಅದು ನರೇಂದ್ರ ಮೋದಿ ಹಾಗೂ ಬಿಜೆಪಿಯವರು. ಯಾವತ್ತೂ ಸತ್ಯಕ್ಕೆ ಜಯವಾಗುತ್ತದೆ. ಅಸತ್ಯ ಒಂದೆರಡು ದಿನ ಕುಣಿದಾಡಬಹುದು. ಆದ್ರೆ, ಕೊನೆಯಲ್ಲಿ ಜಯವಾಗೋದು ಮಾತ್ರ ಸತ್ಯಕ್ಕೆ ಎಂದು ಚಾಟಿ ಬೀಸಿದರು.
ಎಲ್ಲರೂ ಹಿಂದೆಯಿಂದ ಬನ್ನಿ, ಯಾರೂ ಕಳ್ಳ ಬೀಳಬೇಡಿ
ನನಗೆ ವಿಶ್ವಾಸವಿದೆ, ಸೂರ್ಯ ಚಂದ್ರ ಇರೋದು ಎಷ್ಟು ಸತ್ಯನೋ.. ತುಮಕೂರಲ್ಲಿ ನಮ್ಮ ಅಭ್ಯರ್ಥಿ ಎಸ್.ಪಿ. ಮುದ್ದಹನುಮೇಗೌಡರು ಗೆಲ್ಲೋದು ಅಷ್ಟೇ ಸತ್ಯ. ಈಗ ನಾವು ಮುಂದೆ ಹೊರಡ್ತೀವಿ. ನೀವು ಎಲ್ಲರೂ ಹಿಂದೆಯಿಂದ ಬನ್ನಿ, ಯಾರೂ ಕಳ್ಳ ಬೀಳಬೇಡಿ ಎಂದು ಕಾರ್ಯಕರ್ತರಿಗೆ ಪರಮೇಶ್ವರ್ ಸಲಹೆ ನೀಡಿದರು.